ಬುಧವಾರ, ಸೆಪ್ಟೆಂಬರ್ 25, 2019

'ಗಂಟಲ ಕೆರೆತ'

ಒಂದೇ ಗಂಟೆಯಲ್ಲಿ 'ಗಂಟಲ ಕೆರೆತ' ಸಮಸ್ಯೆ ನಿಲ್ಲಿಸುವ ಮನೆ ಔಷಧಿಗಳು !!!!

ಗಂಟಲ ಕೆರೆತದ ಸಮಸ್ಯೆಗೆ ಒಳ್ಳೆಯ ಮನೆಮದ್ದುಗಳೆಂದರೆ, ಅರಿಶಿನದ ಪುಡಿ ಬೆರೆಸಿದ ಬಿಸಿ ಹಾಲು. ರಾತ್ರಿ ಮಲಗುವ ಮುನ್ನ ಒಂದು ಲೋಟ ಈ ಹಾಲನ್ನು ಕುಡಿಯುವ ಮೂಲಕ ಗಂಟಲ ಕೆರೆತ ಮಾತ್ರವಲ್ಲ, ಶೀತ ಹಾಗೂ ಸತತವಾದ ಕೆಮ್ಮು ಸಹಾ ಇಲ್ಲವಾಗುತ್ತದೆ.

  
ನಮ್ಮ ದೇಹದ ಮೇಲೆ ಧಾಳಿಯಿಡುವ ನೂರಾರು ಬಗೆಯ ವೈರಸ್ಸು ಮತ್ತು ಬ್ಯಾಕ್ಟೀರಿಯಾಗಳಿಂದ ರಕ್ಷಿಸಲು ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆ ಕೆಲವಾರು ಕ್ರಮಗಳನ್ನು ಕೈಗೊಳ್ಳುತ್ತದೆ. ಶೀತ, ಜ್ವರ, ಕೆಮ್ಮು, ಸುರಿಯುವ ಮೂಗು, ಕಫ ಮೊದಲಾದವೆಲ್ಲಾ ಈ ರೋಗ ನಿರೋಧಕ ಶಕ್ತಿಯು ಸೋಂಕಿನ ವಿರುದ್ಧ ಕೈಗೊಳ್ಳುವ ಕ್ರಮಗಳೇ ಆಗಿವೆ. ಇದೇ ಕಾರಣಕ್ಕೆ ಈ ತೊಂದರೆಗಳು ಎದುರಾದರೆ ವೈದ್ಯರು ಈ ಕ್ರಮವನ್ನೇಕೆ ದೇಹ ಕೈಗೊಂಡಿತು ಎಂಬುದನ್ನೇ ಮೊದಲಾಗಿ ಪ್ರಶ್ನಿಸಿ ಕಾರಣ ಹುಡುಕುತ್ತಾ ಹೋಗುತ್ತಾರೆ. ಗಂಟಲ ಕೆರೆತವೂ ಇದೇ ಬಗೆಯ ಒಂದು ದೇಹದ ರೋಗ ನಿರೋಧಕ ಶಕ್ತಿಯ ವಿಧವೇ ಆಗಿದೆ.
ಆದರೆ ಇತರ ತೊಂದರೆಗಳಿಗಿಂತ ಹೆಚ್ಚಾಗಿ ಗಂಟಲ ಕೆರೆತ ಭಾರೀ ಕಿರಿಕಿರಿಯುಂಟು ಮಾಡುತ್ತದೆ. ವಿಶೇಷವಾಗಿ ಸದ್ದು ಮಾಡಬಾರದ ಸ್ಥಳಗಳಲ್ಲಿ ಇದನ್ನು ತಾಳಿಕೊಳ್ಳಲಾಗದೇ ಎಷ್ಟೇ ಕಷ್ಟಪಟ್ಟು ಸದ್ದಾಗದಂತೆ ಕೆಮ್ಮಿಕೊಂಡರೂ ಮುಜುಗರ ಎದುರಾಗಿಯೇ ಆಗುತ್ತದೆ. ಈ ಕೆರೆತವನ್ನು ಕಡಿಮೆ ಮಾಡುವುದು ಎಂದರೆ ಇದಕ್ಕೆ ಕಾರಣವಾಗುವ ವೈರಸ್ಸು ಮತ್ತು ಬ್ಯಾಕ್ಟೀರಿಯಾಗಳನ್ನು ಮೂಲದಿಂದ ನಿವಾರಿಸಬೇಕು. ಈ ಕೆಲಸವನ್ನು ನಮ್ಮ ಅಡುಗೆಮನೆಯ ಕೆಲವು ಸಾಮಾಗ್ರಿಗಳು ಅತಿ ಕ್ಷಮತೆಯಿಂದ ನಿರ್ವಹಿಸುತ್ತವೆ. ಅಲ್ಲದೇ ಮುಂದೆ ಈ ಬ್ಯಾಕ್ಟೀರಿಯಾಗಳಿಂದ ತೊಂದರೆಯಾಗದಂತೆ ರೋಗ ನಿರೋಧಕ ಶಕ್ತಿಯನ್ನೂ ಬಲಪಡಿಸುತ್ತವೆ.

ಗಂಟಲು ಕೆರೆತಕ್ಕೆ ಮನೆಮದ್ದು

ಗಂಟಲ ಕೆರೆತಕ್ಕೆ ಕಾರಣಗಳೇನು?
ಸಾಮಾನ್ಯವಾಗಿ ಗಂಟಲ ಒಳಭಾಗದ ಹಿಂಭಾಗದಲ್ಲಿರುವ ಟಾನ್ಸಿಲ್ಸ್ ಎಂಬ ಗಂಟುಗಳಲ್ಲಿ ಸೋಂಕು, ಶೀತ, ಕಫದಿಂದ ಕೂಡಿದ ಗಂಟಲು ಅಥವಾ ಜ್ವರ, ಶೀತ ಮೊದಲಾದ ತೊಂದರೆಗಳ ಪರಿಣಾಮವೂ ಆಗಿರಬಹುದು. ಕೆಲವೊಮ್ಮೆ ಗಾಳಿಯಲ್ಲಿರುವ ಅಲರ್ಜಿಕಾರಕ ಹೊಗೆ, ಪರಾಗ ಧೂಳು ಮೊದಲಾದ ಪ್ರದೂಷಕಗಳಿಂದಲೂ ಎದುರಾಗಬಹುದು.

ಗಂಟಲ ಕೆರೆತದ ಲಕ್ಷಣಗಳು
*ಗಂಟಲ ಒಳಭಾಗದ ಟಾನ್ಸಿಲ್ಸ್ ಇರುವಲ್ಲಿ ಊತ ಕಂಡುಬರುವುದು
*ಕುತ್ತಿಗೆಯ ದುಗ್ಧಗ್ರಂಥಿಗಳ ಭಾಗ ಊದಿಕೊಂಡಿರುವುದು
*ಗಂಟಲ ಭಾಗದಲ್ಲಿ ನೋವು ಮತ್ತು ಉರಿಯೂತದಿಂದ ನುಂಗುವಾಗ ನೋವಾಗುವುದು
*ಕಿವಿಯಲ್ಲಿಯೂ ಕಾಣಬರುವ ನೋವು

ಇವು ಅತಿ ಸಾಮಾನ್ಯವಾಗಿ ಕಂಡುಬರುತ್ತವೆ. ಇತರ ತೊಂದರೆಗಳೆಂದರೆ ಜ್ವರ, ಮೈಕೈ ನೋವು, ಸುಸ್ತು, ತಲೆನೋವು, ನೀರು ತುಂಬಿಕೊಳ್ಳುತ್ತಿರುವ ಕಣ್ಣು, ಸತತವಾಗಿ ಸೋರುವ ಮೂಗು, ಸತತ ಕೆಮ್ಮು ಇತ್ಯಾದಿ. ಇವನ್ನು ನಿವಾರಿಸಲು ಕೆಲವು ಮನೆಮದ್ದುಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದ್ದು ಇದರಲ್ಲಿ ಅತಿ ಸೂಕ್ತವಾದುದನ್ನು ಆರಿಸಿಕೊಂಡು ಸುರಕ್ಶಿತವಾಗಿ ಬಳಸಬಹುದು.

ಉಪ್ಪುನೀರಿನ ಗಳಗಳ
ನಮಗೆ ಗೊತ್ತಿರುವಂತೆ ಅತಿ ಸಮರ್ಥವಾದ ಮತ್ತು ಅತಿ ಪುರಾತನವಾದ ಕ್ರಮವೆಂದರೆ ಉಪ್ಪುನೀರಿನ ಗಳಗಳ. ಉಪ್ಪುನೀರಿನಲ್ಲಿ ಬ್ಯಾಕ್ಟೀರಿಯಾಗಳು ಜೀವಂತವಿರುವುದಿಲ್ಲ. ಈ ಗುಣವನ್ನೇ ಬ್ಯಾಕ್ಟೀರಿಯಾ ನಿವಾರಣೆಗಿಲ್ಲಿ ನಾವು ಬಳಸಿಕೊಳ್ಳುತ್ತಿದ್ದೇವೆ. ಇದಕ್ಕಾಗಿ ಒಂದು ಕಪ್ ಉಗುರುಬೆಚ್ಚನೆಯ ನೀರಿಗೆ ಕಾಲು ಚಿಕ್ಕಚಮಚ ಕಲ್ಲುಪ್ಪು ಹಾಕಿ ಕದಡಿ ಈ ನೀರಿನಿಂದ ಆದಷ್ಟೂ ತಲೆಯನ್ನು ಹಿಂದಕ್ಕೆ ಬಾಗಿಸಿ ಗಳಗಳಿಸಬೇಕು. ದಿನಕ್ಕೆ ಕನಿಷ್ಟ ಎರಡರಿಂದ ಮೂರು ಬಾರಿಯಾದರೂ ಗಳಗಳಿಸಬೇಕು. ಇದರಿಂದ ಬ್ಯಾಕ್ಟೀರಿಯಾಗಳು ಇಲ್ಲವಾಗಿ ಉರಿಗೆ ಕಾರಣವಾಗಿದ್ದ ಆಮ್ಲೀಯತೆಯೂ ನಿವಾರಣೆಯಾಗುತ್ತವೆ.

ಮನೆಯಲ್ಲಿ ಹರಳೆಣ್ಣೆ ಇದ್ದರೆ ಇಷ್ಟೇ ಸಾಕು, 'ಮಲಬದ್ಧತೆ' ನಿವಾರಿಸಬಹುದು!

ಅರಿಶಿನ ಬೆರೆಸಿದ ನೀರು
ಅಜ್ಜಿಯ ಮನೆಮದ್ದಿನಲ್ಲಿ ಗಂಟಲ ಕೆರೆತಕ್ಕೆ ಇನ್ನೊಂದು ಔಷಧಿ ಎಂದರೆ ಅರಿಶಿನದ ಪುಡಿ ಬೆರೆಸಿದ ಬಿಸಿ ಹಾಲು. ರಾತ್ರಿ ಮಲಗುವ ಮುನ್ನ ಒಂದು ಲೋಟ ಈ ಹಾಲನ್ನು ಕುಡಿಯುವ ಮೂಲಕ ಗಂಟಲ ಕೆರೆತ ಮಾತ್ರವಲ್ಲ, ಶೀತ ಹಾಗೂ ಸತತವಾದ ಕೆಮ್ಮು ಸಹಾ ಇಲ್ಲವಾಗುತ್ತದೆ. ವಿಶೇಷವಾಗಿ ಗಂಟಲ ಒಳಭಾಗದಲ್ಲಿ ಊತವಿದ್ದಾಗ ಈ ವಿಧಾನ ಅತಿ ಸೂಕ್ತವಾಗಿದೆ. ಆಯುರ್ವೇದವೂ ನೈಸರ್ಗಿಕ ಪ್ರತಿಜೀವಕದ ರೂಪದಲ್ಲಿ ಈ ಹಾಲನ್ನು ಕುಡಿಯಲು ಸಲಹೆ ಮಾಡುತ್ತದೆ.

ಜೇನು
ಒಂದು ವೇಳೆ ಗಂಟಲ ಕೆರೆತದೊಂದಿಗೆ ಒಳಭಾಗ ಊದಿಕೊಂಡಿದ್ದು ಮೂಗು ಸಹಾ ಸೋರುತ್ತಿದ್ದರೆ ಜೇನು, ಹಸಿಶುಂಠಿ ಹಾಗೂ ಲಿಂಬೆರಸ ಬೆರೆಸಿದ ಬಿಸಿನೀರು ಅತ್ಯುತ್ತಮ ಆಯ್ಕೆಯಾಗಿದೆ. ಜೇನು ಗಂಟಲ ಒಳಭಾಗದಲ್ಲಿ ತೇವಾಂಶವನ್ನು ಹೆಚ್ಚಿಸಿ ಗಟ್ಟಿ ಯಾಗಿದ್ದ ಕಫ ಸಡಿಲಗೊಂಡು ಸುಲಭವಾಗಿ ನಿವಾರಣೆಯಾಗಲು ನೆರವಾಗುತ್ತದೆ. ಉರಿಯೂತಕ್ಕೆ ಗುರಿಯಾಗಿದ್ದ ಅಂಗಾಂಶಗಳಿಂದ ನೀರಿನಂಶವನ್ನು ತೆಗೆದು ಈ ಬಾವನ್ನು ಗುಣಪಡಿಸಲು ಜೇನು ನೆರವಾಗುತ್ತದೆ.

ಬೆಳ್ಳುಳ್ಳಿ

ಬೇರಾವ ತೊಂದರೆಯೂ ಇಲ್ಲದೇ ಕೇವಲ ಗಂಟಲಿನಲ್ಲಿ ಕಿರಿಕಿರಿಯಾಗುತ್ತಿದ್ದು ಆಗಾಗ ಚಿಕ್ಕದಾಗಿ ಕೆಮ್ಮುತ್ತಲೇ ಇರುವ ಸ್ಥಿತಿ ಇದ್ದರೆ ಬೆಳ್ಳುಳ್ಳಿಯ ಕೆಲವು ಎಸಳುಗಳನ್ನು ಹಸಿಯಾಗಿಯೇ ಜಗಿದು ನುಂಗುವ ಮೂಲಕ ಉತ್ತಮ ಪರಿಹಾರ ದೊರಕುತ್ತದೆ. ಬೆಳ್ಳುಳ್ಳಿಯಲ್ಲಿರುವ ಆಲಿಸಿನ್ ಎಂಬ ಪೋಷಕಾಂಶ ಈ ಸ್ತಿತಿಗೆ ಕಾರಣವಾಗಿರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ ಹಾಗೂ ಸೋಂಕನ್ನು ಇಲ್ಲವಾಗಿಸುತ್ತದೆ. ಉತ್ತಮ ಪರಿಣಾಮ ಪಡೆಯಲು ಹಸಿ ಬೆಳ್ಳುಳ್ಳಿಯ ಎಸಳನ್ನು ಜಗಿದು ಹಲ್ಲು ಮತ್ತು ಒಳಕೆನ್ನೆಯ ನಡುವೆ ಇರಿಸಿ ಇದರಿಂದ ರಸ ಇಳಿಯುವಂತೆ ಮಾಡಬೇಕು. ಈ ರಸವನ್ನು ನಿಧಾನವಾಗಿ ಗಂಟಲಿಗೆ ತಾಕುವಂತೆ ನುಂಗಬೇಕು.

ಲಿಂಬೆರಸ

ಶೀತ ಮತ್ತು ಫ್ಲೂ ಜ್ವರವಿದ್ದಾಗ ಎದುರಾಗುವ ಗಂಟಲ ಕೆರೆತಕ್ಕೆ ಇದು ಸೂಕ್ತವಾಗಿದೆ. ಲಿಂಬೆಯಲ್ಲಿರುವ ಆಮ್ಲೀಯ ಗುಣ ಲಾಲಾರಸವನ್ನು ಹೆಚ್ಚಿಸುತ್ತದೆ ಮತ್ತು ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟುಗಳು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ. ಇದಕ್ಕಾಗಿ ಒಂದು ಲೋಟ ಬೆಚ್ಚನೆಯ ನೀರಿಗೆ ಒಂದು ಚಿಕ್ಕ ಲಿಂಬೆಯ (ದೊಡ್ಡದಾದರೆ ಅರ್ಧ) ರಸವನ್ನು ಕೊಂಚ ಉಪ್ಪಿನೊಂದಿಗೆ ಬೆರೆಸಿ ನಿಧಾನಕ್ಕೆ ಗುಟುಕರಿಸಬೇಕು.

ದಾಲ್ಚಿನ್ನಿ

ಒಂದು ವೇಳೆ ಗಂಟಲ ಕೆರೆತದೊಂದಿಗೆ ನುಂಗುವಾಗ ನೋವಾಗುತ್ತಿದ್ದರೆ ಈ ವಿಧಾನ ಉತ್ತಮ ಆಯ್ಕೆಯಾಗಿದೆ. ಕೊಂಚ ದಾಲ್ಚಿನ್ನಿ ಪುಡಿಯನ್ನು ಕುದಿಸಿದ ಟೀ ಕುಡಿದರೆ ಸಾಕು. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಮತ್ತು ಬ್ಯಾಕ್ಟೀರಿಯಾ ನಿವಾರಕ ಗುಣ ಈ ಕ್ರಿಯೆಯನ್ನು ಸುಲಭವಾಗಿಸುತ್ತವೆ.

ದಾಲ್ಚಿನ್ನಿ - ಬಾದಾಮಿ ಹಾಲು
ಅವಶ್ಯವಿರುವ ಸಾಮಾಗ್ರಿಗಳು
*ಒಂದು ಕಪ್ ಬಾದಾಮಿ ಹಾಲು
*ಅರ್ಧ ಚಿಕ್ಕ ಚಮಚ ದಾಲ್ಚಿನ್ನಿ ಪುಡಿ
*1/8 ಚಿಕ್ಕ ಚಮಚ ಅಡುಗೆ ಸೋಡಾ
*ಒಂದು ದೊಡ್ಡ ಚಮಚ ಜೇನು ಅಥವಾ ನಿಮ್ಮ ಆಯ್ಕೆಯ ಸಿಹಿಕಾರಕ ವಸ್ತು
*ಇವನ್ನೆಲ್ಲಾ ಬೆರೆಸಿ ಕುದಿಸಿ ಬಿಸಿಬಿಸಿಯಾಗಿರುವಂತೆಯೇ ಕುಡಿಯಬೇಕು.

ಚಿಕನ್ ಸೂಪ್

ಕೇವಲ ಶೀತವಿದ್ದು ಗಂಟಲ ಕೆರೆತವೂ ಇದ್ದರೆ ಕೋಳಿಮಾಂಸದ ಸೂಪ್ ಉತ್ತಮ ಆಯ್ಕೆಯಾಗಿದೆ. ಈ ಸೂಪ್ ದೇಹಕ್ಕೆ ಹೆಚ್ಚಿನ ಪ್ರಮಾಣದ ನೀರನ್ನು ಒದಗಿಸುತ್ತದೆ. ಒಂದು ವೇಳೆ ಮೈಕೈನೋವು ಮತ್ತು ಸುಸ್ತು ಇದ್ದರೆ ಈ ಸೂಪ್ ಗೆ ಕೆಲವು ಎಸಳು ಬೆಳ್ಳುಳ್ಳಿಗಳನ್ನೂ ಜಜ್ಜಿ ಸೇರಿಸಿ ಕುಡಿಯಬಹುದು. ತಾಜಾ ಮಾಂಸದಿಂದ ತಯಾರಿಸಿದ ಸೂಪ್ ಅತ್ಯುತ್ತಮ. ಸಮಯದ ಆಭಾವವಿದ್ದರೆ ಸಿದ್ಧರೂಪದಲ್ಲಿ ಸಿಗುವ ಸೂಪ್ ಪ್ಯಾಕೆಟ್ಟುಗಳನ್ನೂ ಬಳಸಬಹುದು.

ಪುದಿನಾ ಟೀ

ಒಂದು ವೇಳೆ ನೀವು ಕೆಲಸದ ಮೇಲಿದ್ದು ವಿಶ್ರಾಂತಿ ಪಡೆದುಕೊಳ್ಳಲು ಅವಕಾಶವಿಲ್ಲದಿದ್ದರೆ ಗಂಟಲ ಕೆರೆತ ಮತ್ತು ಇತರ ತೊಂದರೆಗಳಿಂದ ಕ್ಷಿಪ್ರವಾದ ಪರಿಹಾರ ಪಡೆದುಕೊಳ್ಳಲು ಪುದಿನಾ ಎಲೆಗಳನ್ನು ಕುದಿಸಿ ತಯಾರಿಸಿದ ಟೀ ಅತ್ಯುತ್ತಮವಾಗಿದೆ. ಈ ಟೀ ತಕ್ಷಣಕ್ಕೆ ಗಂಟಲಕೆರೆತದಿಂದ ಪೂರ್ಣ ಪರಿಹಾರ ವನ್ನು ಒದಗಿಸದೇ ಹೋದರೂ, ಕೆಲವೇ ನಿಮಿಷಗಳಲ್ಲಿ ಗಂಟಲ ಒಳಭಾಗವನ್ನು ಕೊಂಚವೇ ಮರಗಟ್ಟಿಸುವ ಮೂಲಕ ನೋವು ಮತ್ತು ಕೆರೆತವನ್ನು ಮುಂದೂಡುತ್ತದೆ. ನಿಧಾನವಾಗಿ ದೇಹದ ರೋಗ ನಿರೋಧಕ ಶಕ್ತಿ ಈ ತೊಂದರೆಯನ್ನು ನಿವಾರಿಸುತ್ತದೆ. ಇದಕ್ಕಾಗಿ ಒಂದು ಕಪ್ ನೀರಿನಲ್ಲಿ ಸುಮಾರು ಹದಿನೈದು ಇಪ್ಪತ್ತು ತಾಜಾ ಪುದಿನಾ ಎಲೆಗಳನ್ನು ಹಾಕಿ ಸುಮಾರು ಐದು ನಿಮಿಷ ಕುದಿಸಿ ಬಳಿಕ ಉರಿ ಆರಿಸಿ ತಣಿಯಲು ಬಿಡಬೇಕು. ಇದು ಸಿಹಿಯಾದ ಎಲೆಗಳಾದ ಕಾರಣ ಇದಕ್ಕೆ ಹೆಚ್ಚಿನ ಸಕ್ಕರೆ ಬೆರೆಸುವ ಅಗತ್ಯವಿಲ್ಲ.

ಹೊಟ್ಟೆಯಲ್ಲಿ ಗ್ಯಾಸ್‌ ಸಮಸ್ಯೆಗಳಾದರೆ, ಇಲ್ಲಿದೆ ನೋಡಿ ಸಿಂಪಲ್ ಮನೆಮದ್ದುಗಳು

ಬಿಸಿಬಿಸಿ ಪೇಯಗಳು

ಬೇರಾವುದೇ ತೊಂದರೆ ಇಲ್ಲದೇ ಕೇವಲ ಚಿಕ್ಕದಾಗಿ ಗಂಟಲ ಕೆರತ ಮಾತ್ರವೇ ಇದ್ದರೆ ನಿಮ್ಮ ಆಯ್ಕೆಯ ಯಾವುದೇ ಮೂಲಿಕೆಯನ್ನು ಕುದಿಸಿದ ಟೀ ತಯಾರಿಸಿ ಬಿಸಿಬಿಸಿಯಾಗಿ ಕುಡಿಯಬೇಕು. ತುಳಸಿ, ದಾಲ್ಚಿನ್ನಿ, ಹಸಿಶುಂಠಿ, ಲಿಂಬೆರಸ ಮತ್ತು ಜೇನು, ಅಥವಾ ನಿಮ್ಮ ಆಯ್ಕೆಯ ಮಸಾಲೆಗಳನ್ನು ಬೆರೆಸಿ ತಯಾರಿಸಿದ ಟೀ ಸಹಾ ಆಗಬಹುದು.

ಲಘು ಆಹಾರ

ಗಂಟಲ ಕೆರೆತವಿದ್ದಾಗ ಆದಷ್ಟೂ ಲಘುವಾಗಿರುವ ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರಗಳನ್ನೇ ಸೇವಿಸಬೇಕು. ಇಡ್ಲಿ ಮೊದಲಾದ ಹಬೆಯಲ್ಲಿ ಬೇಯಿಸಿದ ಖಾದ್ಯಗಳು ಉತ್ತಮವಾಗಿವೆ. ಉಳಿದಂತೆ ಬಿಸಿಬಿಸಿ ಖಿಚಡಿ, ದಾಲ್, ಬೇಯಿಸಿ ಜಜ್ಜಿದ ತರಕಾರಿಗಳಿಂದ ತಯಾರಿಸಿದ ಪಲ್ಯ ಮೊದಲಾದವು ಸೂಕ್ತವಾಗಿವೆ. ಅಂತೆಯೇ ಗಂಟಲ ಕೆರೆತಕ್ಕೆ ಪ್ರಚೋದಿಸುವ ಆಹಾರಗಳನ್ನು ಸೇವಿಸಬಾರದು. ಉದಾಹರಣೆಗೆ ಐಸ್ ನೀರು, ಹಾಲಿನ ಪದಾರ್ಥಗಳು, ಆಮ್ಲೀಯವಲ್ಲದ ಹಣ್ಣುಗಳು ಇತ್ಯಾದಿ.

ವಿಜಯಕರ್ನಾಟಕ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ