ಮಕ್ಕಳ ಕಥೆ# ಹನುಮಕ್ಕನ ರಾಮ ಭಕ್ತಿ :-
ರಾಮಾನಾಥ್ ಸೇಟು ರವರು ಸುಂದರವಾದ 'ಶ್ರೀ ಸೀತಾ ರಾಮ' ಮಂದಿರವನ್ನು 'ಕಲ್ಯಾಣಿ ಪುರದಲ್ಲಿ' ಕಟ್ಟಿಸಿದ್ದರು, ನಿತ್ಯ ಪೂಜೆ, ಭಜನೆ, ನೈವೇದ್ಯ,ಮಂಗಳಾರತಿ, ಹಾಗೂ ವಿಶೇಷವಾಗಿ ಸೀತಾರಾಮ ಕಲ್ಯಾಣ, ರಾಮೋತ್ಸವ,ಗಳನ್ನು ಆರಂಭಿಸಿ ಈಗಾಗಲೇ ಇಪ್ಪತ್ತೈದು ವರ್ಷಗಳೇ ಕಳೆದಿವೆ. ರಾಮನಾಥ ಸೇಟುರವರು ಧರ್ಮಿಷ್ಠರಾಗಿದ್ದು, ದೇವಸ್ಥಾನ, ಬಡವರಿಗೆ ಅನ್ನದಾನ, ಶಿಕ್ಷಣ, ವೈದ್ಯಕೀಯ ಸೌಲಭ್ಯ, ಉಚಿತ ಕಲ್ಯಾಣ ಮಂಟಪ, ಹೀಗೆ ಬೇಕಾದಷ್ಟು ಸಮಾಜ ಸೇವೆಗಳನ್ನು ಮಾಡಿದ್ದರು. ಇಷ್ಟಾದರೂ ಅವರು ಒಂದು ದಿನವೂ ದೇವಸ್ಥಾನದಲ್ಲಿ ಅಧಿಕಾರಯುತವಾಗಿ ಮುಂದೆ ನಿಂತವರಲ್ಲ. ಎಲ್ಲರಂತೆ ಸರದಿಯಲ್ಲಿ ಬರುತ್ತಿದ್ದರು. ಯಾರಾದರೂ ಕೇಳಿದರೆ, ಭಗವಂತನು ಕರೆಸಿಕೊಳ್ಳುವ ತನಕ ನಾವು ಕಾಯಬೇಕು ಎನ್ನುತಿದ್ದರು.
ಇವರ ನಂತರ ಇವರ ಮಗ 'ಪ್ರೇಮನಾಥ್ ಸೇಟು', ತಂದೆಯಂತೆ ಒಳ್ಳೆಯ ಕೆಲಸಗಳನ್ನು ಮಾಡಿ ಹೆಸರು ಪಡೆದಿದ್ದನು. ಈಗ ಅವರ ಮಗ ಅಂದರೆ 'ರಾಮನಾಥ್' ಸೇಟು ರವರ ಮೊಮ್ಮಗ 'ಅಭಿರಾಮ' ಸೇಟು ಉಸ್ತುವಾರಿ ವಹಿಸಿಕೊಂಡು ಶ್ರೀ ಸೀತಾ-ರಾಮ ದೇವರ ಪೂಜಾ ಕೈಂಕರ್ಯವನ್ನು ಯಾವುದೇ ಲೋಪವಿಲ್ಲದಂತೆ ಚೆನ್ನಾಗಿ ನಡೆಸಿ ಕೊಂಡು ಬರುತ್ತಿದ್ದಾನೆ. ಕಲ್ಯಾಣಿ ಪುರದ ಸುತ್ತಮುತ್ತ ಹಳ್ಳಿ ಹರಾಸುಗಳಿಗೆಲ್ಲಾ, ದೊಡ್ಡ ರಾಮ ಮಂದಿರ ಇದೊಂದೇ ಆಗಿತ್ತು. ನಿತ್ಯ ಪೂಜೆ, ಮತ್ತು ನೈವೇದ್ಯವನ್ನು ದಿನಕ್ಕೊಂದು ಕುಟುಂಬದವರು ವಹಿಸಿಕೊಂಡಿದ್ದರು. ಪೂಜೆ ಮಾಡಿಸುವರ ಹೆಸರನ್ನು ಅರ್ಚಕರೆ ತಿಳಿಸುತ್ತಿದ್ದರು. ಶ್ರೀಮಂತರ ಹೆಸರುಗಳು ಸಾಕಷ್ಟು ಇದ್ದವು. ಹಾಗೇ ಊರಿನ ಓರ್ವ ಬಡ ಮುದುಕಿ ಹನುಮಕ್ಕನ ಹೆಸರು ಪಟ್ಟಿಯಲ್ಲಿ ಇತ್ತು.
ಆ ದಿನ ಹನುಮಕ್ಕನ ಸೇವೆ ಇತ್ತು. ಆಕೆ ಕಾಡೆಲ್ಲಾ ಹುಡುಕಿ ಒಂದು ಬುಟ್ಟಿ ತುಂಬಾ ದುಂಡುಗಾಯಿ ಹಣ್ಣು ತಂದಿದ್ದಳು. ಹನುಮಕ್ಕ ನೀನು ರಾಮನ ನೈವೇದ್ಯಕ್ಕೆ ಏನು ತಂದಿದಿ ಎಂದು ಕೇಳಿದಾಗ, ಅರ್ಚಕರೇ ನಾನು ರಾಮನಿಗೆ ಬಹಳ ಇಷ್ಟ ಎಂದು ಸಿಹಿಯಾದ ದುಂಡುಗಾಯಿ-ಹಣ್ಣು, ತಂದಿದ್ದೇನೆ. ಶಬರಿಯು ಇದೇ ಹಣ್ಣನ್ನು ರಾಮನಿಗೆ ಕೊಟ್ಟಿದ್ದಳು ಎಂದು ಸಂತೋಷದಿಂದ ತೋರಿಸಿದಳು. ಹಣ್ಣುಗಳನ್ನು ನೋಡಿದ ಪೂಜಾರಿ ಏನು ಹನುಮಕ್ಕ ಇದೇನು ತ್ರೇತಾಯುಗವೇ, ಈ ಕಾಡು ಹಣ್ಣುಗಳನ್ನು ರಾಮ ತಿನ್ನುವುದಿಲ್ಲ. ಕಲಿಯುಗದಲ್ಲಿ ಬೇಕಾದಷ್ಟು ಒಳ್ಳೆಯ ಹಣ್ಣು , ತಿನಿಸುಗಳು ಸಿಗುತ್ತದೆ. ಇದನ್ನು ಕೇಳಿ, ಅಲ್ಲಾ ಪೂಜಾರಪ್ಪ ನಮ್ಮಂತಹ ಬಡವರು ಅಷ್ಟು ಹಣ ಕೊಟ್ಟು ತರುವುದು ಹೇಗೆ?
ಪೂಜಾರಿ ಸಿಟ್ಟಿನಿಂದ ಅಜ್ಜಿ ನಿನ್ನ ಹಣ್ಣುಗಳನ್ನು ತೆಗೆದುಕೊಂಡು ಹೋಗು ಈ ದಿನ ಸೇಟು ಅಭಿರಾಮ ರಿಂದ ನೈವೇದ್ಯ ನಡೆಯುತ್ತದೆ ಎಂದು ಅಜ್ಜಿಯನ್ನು ತಳ್ಳಿದ ರಭಸಕ್ಕೆ ಹನುಮಕ್ಕ ಬಿದ್ದಳು. ಚೆಲ್ಲಾಪಿಲ್ಲಿಯಾಗಿ ಬಿದ್ದ ಹಣ್ಣುಗಳನ್ನು ಹನುಮಕ್ಕ ಆರಿಸಿ ಬುಟ್ಟಿಯಲ್ಲಿ ತುಂಬಿ ದೇವಸ್ಥಾನದ ಹೊರಗೆ ಬಂದು ಬಿಕ್ಷುಕರ ಜೊತೆ ಕುಳಿತಳು.
ಆಗಿನ್ನೂ ಅಭಿರಾಮ ಸೇಟು ತನ್ನ ಹೆಂಡತಿಯ ಜೊತೆ ಮಂದಿರಕ್ಕೆ ಬಂದನು. ಪೂಜಾರಿ ಆತನನ್ನು ವಿಶೇಷವಾಗಿ ಸ್ವಾಗತಿಸಿದನು. ಅಭಿರಾಮನು ನಮಸ್ಕರಿಸಿ ರಾಮನಿಗೆ ನೈವೇದ್ಯವನ್ನು ತಾನೇ ಇಟ್ಟು ಹೊರಟನು. ಹೊರಡುವಾಗ ಪೂಜಾರಿ ಕರೆದು ಮುದುಕಿ ಜೊತೆಗೆ ಏನು ಗಲಾಟೆ ಎಂದು ಕೇಳಿದ. ಮುದುಕಿ ತಂದ ದುಂಡು ಕಾಯಿ-ಹಣ್ಣಿ ನ ವಿಷಯ ಹೇಳಿದನು. ಆಕೆ ಕಲಿಯುಗದ ಶಬರಿ ಎಂದುಕೊಂಡಿದ್ದಾಳೆ ಎಂದನು. ಇದನ್ನು ಕೇಳಿದ ಸೇಟು ಮತ್ತು ಅವನ ಹೆಂಡತಿ, ಹೌದೇ, ಇದಂತು ರಾಮನಿಗೆ ಅವಮಾನ ಮಾಡಿದಂತೆ ನಾವು ಹೇಳುತ್ತೇವೆ ಎಂದು, ಬೇಜಾರಿನಿಂದ ಕುಳಿತಿದ್ದ ಹನುಮಕ್ಕ ನ ಹತ್ತಿರ ಬಂದು, ಅಜ್ಜಿ ನೀವು ಕಾಡಿನಿಂದ ತಂದ ಹಣ್ಣುಗಳನ್ನು ದೇವರು ಸ್ವೀಕರಿಸುವುದಿಲ್ಲ ಎಂದರು. ಹನುಮಕ್ಕ , ನೋಡುತ್ತಿರಿ ಒಂದಲ್ಲ ಒಂದು ದಿನ ನನ್ನ ರಾಮ ನಾನು ತಂದ ಹಣ್ಣುಗಳನ್ನು ತಿನ್ನುತ್ತಾನೆ ಎಂದಳು. ಅದಕ್ಕೆ ಸೇಟು, ಓಹೋ ಅಜ್ಜಿ ನೀನು ಶಬರಿ ಎಂದು ಕೊಂಡೆಯಾ ಅದು ಸಾಧ್ಯವಿಲ್ಲ ಎಂದು ಹೇಳಿ ನಕ್ಕು ಮುಂದೆ ಹೊರಟನು. ಹನುಮಕ್ಕ ರಾಮನಾಮ ಜಪ ಮಾಡುತ್ತಿದ್ದಳು.
ಮುಂದಿನ ವಾರವೇ ಅಭಿರಾಮ್ ಸೇಟುವಿನ ಹತ್ತು ವರ್ಷದ ಮಗನ ಹುಟ್ಟಿದಹಬ್ಬ ಬಂದಿತ್ತು. ಅದಕ್ಕಾಗಿ, ಸೇಟು ಮತ್ತು ಅವನ ಹೆಂಡತಿ ರಾಮನಿಗೆ ಒಳ್ಳೆಯ ವಸ್ತ್ರಗಳು, ಆಭರಣಗಳು, ಬಡವರಿಗೆ ಅನ್ನದಾನ, ವಸ್ತ್ರದಾನ ಎಲ್ಲ ಇಟ್ಟುಕೊಂಡಿದ್ದರು. ದೇವಾಲಯದಲ್ಲೂ ಅದಕ್ಕಾಗಿ ಅಲಂಕಾರ ಸಿದ್ಧತೆಗಳು ನಡೆಯುತ್ತಿದ್ದವು. ಆ ದಿನ ಮತ್ತೆ ಅದೇ ರೀತಿ ಬುಟ್ಟಿ ತುಂಬಾ ಹಣ್ಣು ತಂದು, ದೇವಾಲಯದ ಆವರಣವನ್ನೆಲ್ಲ ಗುಡಿಸುತ್ತಿದ್ದಳು . ಇದನ್ನು ನೋಡಿದ ಪೂಜಾರಿ ಅಜ್ಜಿ ಇದನ್ನೆಲ್ಲ ಮಾಡಲು ಕೆಲಸಗಾರರಿದ್ದಾರೆ. ನೀನು ಹೋಗು ಎಂದನು. ಅದಕ್ಕೆ ಮುದುಕಿಯು ಏ ಪೂಜಾರಿ ಇದು ನನ್ನ ಭಕ್ತಿ, ನಾನು ರಾಮನ ಸೇವೆ ಮಾಡುತ್ತೇನೆ. ನೀನು ಯಾಕೆ ತಡೆಯುತ್ತಿ ? ಹೀಗೆ ಕೇಳಿದಾಗ ಏನಾದರೂ ಮಾಡಿಕೋ ಎಂದು ಪೂಜಾರಿ ಹೊರಟನು. ಹನುಮಕ್ಕ ತಾನು ಕುಳಿತುಕೊಳ್ಳುವ ಜಾಗ, ಮೆಟ್ಟಿಲು, ಅಂಗಳ, ಎಲ್ಲಾ ಗುಡಿಸಿ ಅಲಂಕರಿಸಿದ ಹೂವಿನ ಮೇಲೆ ಹಣ್ಣಿನ ಬುಟ್ಟಿ ಇಟ್ಟು ರಾಮಧ್ಯಾನ ಮಾಡುತ್ತಾ ಕುಳಿತಳು. ಅವಳ ಅಕ್ಕಪಕ್ಕ ಬಿಕ್ಷುಕರು ಇದ್ದು, ಇವಳ ರಾಮನ ಮೇಲಿನ ಭಕ್ತಿಯನ್ನು ಹೊಗಳುತ್ತಿದ್ದರು.
ಸೇಟು ಮತ್ತು ಆತನ ಹೆಂಡತಿ ತಮ್ಮ ಮಗನೊಂದಿಗೆ ದೇವಸ್ಥಾನಕ್ಕೆ ಬಂದು, ರಾಮನಿಗೆ ಅಲಂಕಾರ ಮಾಡಲು ವಸ್ತ್ರಾಭರಣಗಳನ್ನು ಕೊಟ್ಟರು. ರಾಮನಿಗೆ
ಅಲಂಕಾರ, ವಿಶೇಷ ಪೂಜೆ, ಆರತಿ, ಪ್ರಸಾದ, ಎಲ್ಲ ಮುಗಿದ ಮೇಲೆ ಸೇಟು ದಂಪತಿಗಳು ಬಿಕ್ಷುಕರಿಗೆ ದಾನ ಮಾಡಲು ಬಂದರು. ಎಲ್ಲಾ ಬಿಕ್ಷುಕರಿಗೆ ದಾನ ಕೊಟ್ಟಂತೆ, ಹನುಮಕ್ಕನಿಗೆ ಕೊಡಲು ಬಂದಾಗ, ನನಗೆ ಬೇಡ ಎಂದಳು. ಸೇಟು ಗೆ ಸಿಟ್ಟು ಬಂದು ನನ್ನ ಮಗನ ಹುಟ್ಟಿದ ಹಬ್ಬಕ್ಕೆ ದಾನ ಕೊಡುತ್ತಿದ್ದೇನೆ. ಬೇರೆ ಏನಾದರೂ ಬೇಕಾದರೆ ಕೇಳು ಕೊಡುತ್ತೇನೆ. ಸೇಟು ನಾನು ಬಿಕ್ಷುಕಿಯಲ್ಲ ಆಗ ಸೇಟು ಮತ್ತೇಕೆ ಬಿಕ್ಷುಕರ ಜೊತೆ ಕುಳಿತಿದ್ದಿ, ಹೀಗೆ ಹೇಳಿದಾಗ, ಸೇಟು ದೇವಸ್ಥಾನ 'ದೇವರಮನೆ' . ಇಲ್ಲಿ ಭಕ್ತರು ಎಲ್ಲಿ ಬೇಕಾದರೂ ಕೂರಬಹುದು ರಾಮನಿಗೆ, ಶ್ರೀಮಂತ, ಬಡವ ಬಿಕ್ಷುಕ ಅಂತ ಇಲ್ಲ. ಇದನ್ನು ಕೇಳಿ ಅಲ್ಲೇ ನಿಂತಿದ್ದ ಪೂಜಾರಿ, ಸೇಟು ನೀನು ಬಾ, ಈ ಮುದುಕಿಗೆ ತಲೆ ಕೆಟ್ಟಿದೆ ಎಂದು ಕರೆದುಕೊಂಡು ಹೋದನು. ಅವರವರ ಮನೆಗೆ ಹೋದರು.
ಮರುದಿನ ಬೆಳಿಗ್ಗೆ ಪೂಜಾರಿ ದೇವಸ್ಥಾನಕ್ಕೆ ಬಂದು ದೇವರನ್ನು ನೋಡುತ್ತಾನೆ. ಹಾಕಿದ್ದ ಒಡವೆಗಳು ಒಂದು ಇರಲಿಲ್ಲ. ಕಳ್ಳತನವಾಗಿದೆ ಕಳ್ಳತನವಾಗಿದೆ ಎಂದು ಬೊಬ್ಬೆ ಹೊಡೆದ. ಊರವರು ಸೇರಿದರು. ಸೇಟು ಮತ್ತು ಆತನ ಪತ್ನಿ ಬಂದರು. ನಿಮಗೆ ಯಾರ ಮೇಲಾದರೂ ಅನುಮಾನ ಇದೆಯೇ ಎಂದು ಅರ್ಚಕನನ್ನು ಕೇಳಿದ. ಪೂಜಾರಿಗೆ ಅಜ್ಜಿಯ ಮೇಲೆ ಕಣ್ಣು ಹೋಯಿತು. ಸ್ವಲ್ಪ ಸಿಟ್ಟು ಇತ್ತು. ನನಗೆ ಮುದುಕಿಯ ಮೇಲೆ ಅನುಮಾನ. ಎಲ್ಲರಿಗಿಂತ ಮೊದಲು ದೇವಸ್ಥಾನಕ್ಕೆ ಬಂದು, ಎಲ್ಲರೂ ಹೋದ ಮೇಲೆ ಕೊನೆಗೆ ಹೋಗುವುದು ಇವಳೊಬ್ಬಳೇ, ಆಭರಣ ಲಪಟಾಯಿಸಿ ಬೇಕೆಂದು ಹೊಂಚುಹಾಕಿದ್ದಳು ಎಂದನು.
ಅಜ್ಜಿ ಆಭರಣಗಳನ್ನು ಕದ್ದೆಯಾ? ಸೇಟು ಕೇಳಿದಾಗ, ಇಲ್ಲ ಸೇಟು ನಾನ್ಯಾಕೆ ಕದಿಯಲಿ ನನ್ನನ್ನು ನಂಬಿ ಎಂದು ಭಯದಿಂದ ಹೇಳಿದಾಗ, ಅರ್ಚಕನು, ಈ ಮುದುಕಿ ಬಡಪಟ್ಟಿಗೆ ಒಪ್ಪುವುದಿಲ್ಲ. ಹೊಡೆದರೆ ಬಾಯಿ ಬಿಡುತ್ತಾಳೆ ಎಂದ ಪೂಜಾರಿ, ಸೇಟು ಅವನ ಹೆಂಡತಿ ಮೂರು ಜನ. ಹಿಗ್ಗಾಮುಗ್ಗ ಹೊಡೆದರು. ಊರ ಜನರಿಬ್ಬರು ಸೇರಿ ಹೊಡೆದರು. ಅಜ್ಜಿಗೆ ತುಂಬಾ ಪೆಟ್ಟಾಯಿತು ಹೀಗೆ ಹೊಡೆಯುತ್ತಾ ಇದ್ದಾಗ, 'ನಿಲ್ಲಿಸಿ' ಎಂಬ ಧ್ವನಿ ಬಂದತ್ತ ತಿರುಗಿದಾಗ, ರಾಮನ ಮುಂದೆ ಕೋಲು ಹಿಡಿದುಕೊಂಡು 'ರಾಮನಾಥ ಸೇಟು'(ಸತ್ತಿದ್ದ) ನಿಂತಿದ್ದರು. ಎಲ್ಲರೂ ಹೆದರಿ ದೂರ ಓಡಿದರು. ಆಗ ರಾಮನಾಥ ಸೇಟು ಅಜ್ಜಿಯ ಹತ್ತಿರ ಬಂದು ಆಕೆಯ ತಲೆಯ ಮೇಲೆ ಕೈಯಿಟ್ಟು ,ಈ ಜನರು ನಿನಗೆ ಅನ್ಯಾಯ ಮಾಡಿದ್ದಾರೆ. ನೀನು ಒಡವೆ ಕದ್ದಿಲ್ಲ ಎಂದು ನನಗೆ ಗೊತ್ತು ಎಂದಾಗ, ನೀವು ಯಾರಪ್ಪ ಎಂದಳು. ನಾನು ಈ ದೇವಸ್ಥಾನದ ಸ್ವಾಮಿ ಬಾ ನನ್ನ ಜೊತೆ ನಿನ್ನ ಹಣ್ಣುಗಳಿಂದ ದೇವರಿಗೆ ನೈವೇದ್ಯ ಮಾಡೋಣ ಎಂದು ಕರೆದಾಗ, ನಿಜವೇ ರಾಮನು ನಾನು ತಂದ ಹಣ್ಣು ತಿನ್ನುವನೇ ಎಂದು ಕೇಳಿದಳು. ರಾಮನಿಗೆ ನೀನು ತಂದ ಹಣ್ಣು ಇಷ್ಟ ಎಂದು ಕೈಹಿಡಿದು ಹಣ್ಣಿನ ಬುಟ್ಟಿ ಸಮೇತ ರಾಮ ನಾಥ ಸೇಟು ಗರ್ಭಗುಡಿಯೊಳಗೆ ಹೋದನು. ತನ್ನಿಂತಾನೇ ಬಾಗಿಲು ಮುಚ್ಚಿತು. ಹೊರಗೆ ಕೌತುಕ ರಾಗಿ ಜನ ನೋಡುತ್ತಿದ್ದಾರೆ. ಸ್ವಲ್ಪ ಹೊತ್ತಿಗೆ ಹನುಮಕ್ಕ ಹೊರಗೆ ಬಂದು ಪೂಜಾರಪ್ಪ ನಾನು ತಂದ ಹಣ್ಣುಗಳನ್ನು ರಾಮ ಸ್ವೀಕಾರ ಮಾಡಿದ ನಾನು ಧನ್ಯಳಾದೆ ಎಂದು ಸಂತೋಷದಿಂದ ಹೇಳಿದಳು.
ಎಲ್ಲರಿಗೂ ಆಶ್ಚರ್ಯವಾಯಿತು. ಸೇಟು ಕೇಳಿದ ಅಜ್ಜಿ ನನ್ನ ತಾತ ನಿನ್ನನ್ನು ಕರೆದುಕೊಂಡು ಹೋಗಿದ್ದು, ಅದು ಹೇಗೆ? ಹೌದು ನಾನು ನಿಮ್ಮ ತಾತನನ್ನು ನೋಡಿದೆ ಎಂದಾಗ, ಅರ್ಚಕನು, ಸೇಟು ನಿಮ್ಮ ತಾತ ಸ್ವರ್ಗ ವಾಸಿಯಾಗಿ
25 ವರ್ಷಗಳಾಗಿದೆ. ಹೌದು ಮತ್ತೆ ಇದು ಹೇಗೆ ಸಾಧ್ಯ ಪೂಜಾರಿ, ಇದೆಂಥ ಚಮತ್ಕಾರ ಎಂದು ಮಾತಾಡಿದರು. ಇದು ಚಮತ್ಕಾರ ಅಲ್ಲ, ರಾಮನ ಲೀಲೆ. ನನ್ನನ್ನು ಕರೆದುಕೊಂಡು ಹೋಗಿದ್ದು, ನನ್ನ ಕೈಯಾರೆ ರಾಮನಿಗೆ ಹಣ್ಣು ತಿನ್ನಿಸಿದ್ದು ಎಲ್ಲವೂ ರಾಮ ಲೀಲೆ ಎಂದು ಅಜ್ಜಿ ಹೇಳಿದಳು. ಸೇಟು ಆಶ್ಚರ್ಯವಾಗಿ ನೋಡುತ್ತಾ ನಿಂತ. ಆಗ ಅರ್ಚಕನು,
ಸೇಟು ಇದು ನಿಜ. 'ಭಕ್ತಿಗೆ ತುಂಬಾ ಶಕ್ತಿ' ಇರುತ್ತದೆ ಆದ್ದರಿಂದ ಅಜ್ಜಿ ಹೇಳಿದ್ದೆಲ್ಲ ನಿಜವಾದುದು ಎಂದನು. ತಕ್ಷಣ ಸೇಟು ಹೌದು ಪೂಜಾರಿ. ಅಜ್ಜಿ ಕಲಿಯುಗದ ಶಬರಿ ಎಂದು ಹೇಳಿದಾಗ ಅಲ್ಲಿದ್ದವರೆಲ್ಲಾ ಹೌದು ಎಂದು ಅಂದಿನಿಂದಲೇ ಅಜ್ಜಿಗೆ ಬಹಳ ಗೌರವ, ಪ್ರೀತಿ ಕೊಟ್ಟರು. ಹನುಮಕ್ಕ ತಾನೇ ರಾಮನಿಗೆ ಹಣ್ಣು ತಿನ್ನಿಸಿದ ಸಂತಸದಲ್ಲಿ ದಿನ ಕಳೆಯುತ್ತಿದ್ದಳು. ಪ್ರತಿನಿತ್ಯವೂ ರಾಮನಿಗೆ ಹಣ್ಣು ತಂದುಕೊಡುತ್ತಿದ್ದಳು. ಬರುವ ಭಕ್ತರೆಲ್ಲ ರಾಮನ ಅನುಗ್ರಹದೊಂದಿಗೆ ಹನುಮಕ್ಕನ ಆಶೀರ್ವಾದ ಪಡೆಯುತ್ತಿದ್ದರು.
ಪ್ರೇಮ ಮುದಿತಾ ಮನಸೆ ಕಹೋ
ರಾಮ ರಾಮ ರಾಮ ಶ್ರೀ ರಾಮ ರಾಮ ರಾಮ
ರಾಮ ರಾಮ ರಾಮ ಶ್ರೀ ರಾಮ ರಾಮ ರಾಮ!
ಪರಮ ಶಾಂತಿ ಸುಖನಿಧಾನ, ದಿವ್ಯ ರಾಮ ರಾಮ
ನಿರಾದಾರಕೋ ಆಧಾರ , ಏಕ ರಾಮ ರಾಮ
ಶ್ರೀ ರಾಮ ರಾಮ ರಾಮ ಶ್ರೀ ರಾಮ ರಾಮ ರಾಮ
ಮಾತಾ ಪಿತಾ ಬಂಧು ಸಖ ಸಬ ಹೀ ರಾಮ ರಾಮ
ಭಕ್ತ ಜನನ ಜೀವನ ಧನ ಏಕ ರಾಮ ರಾಮ
ಶ್ರೀ ರಾಮ ರಾಮ ರಾಮ ಶ್ರೀ ರಾಮ ರಾಮ ರಾಮ!
ವಂದನೆಗಳೊಂದಿಗೆ,
ಬರಹ:- ಆಶಾ ನಾಗಭೂಷಣ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ