ಗುರುವಾರ, ಏಪ್ರಿಲ್ 7, 2022

ರಾಮ ಸೇತುವೆ

ರಾಮ ಸೇತುವೆ:- 

ಪೌರಾಣಿಕ ಮಹತ್ವ  ಪಡೆದಿರುವ  'ರಾಮಸೇತು' ಇದು ಭಾರತದ ದಕ್ಷಿಣ ಭಾಗದ ತಮಿಳುನಾಡಿನ  'ರಾಮೇಶ್ವರಂ' ಎಂಬ ಪುಣ್ಯಕ್ಷೇತ್ರದಲ್ಲಿ ಇದೆ.  ಇಲ್ಲಿ ಆರಂಭಗೊಂಡ ಸೇತುವೆಯ ಇನ್ನೊಂದು ಭಾಗ ಶ್ರೀಲಂಕಾದ  ವಾಯುವ್ಯ  ತುದಿಯಲ್ಲಿರುವ ಮನ್ನಾರ್  ದ್ವೀಪಕ್ಕೆ ಸಂಪರ್ಕ ಕಲ್ಪಿಸುವ ಸುಣ್ಣ ಹಾಗೂ ಕಲ್ಲಿನ ಸೇತುವೆ ಇದಾಗಿದೆ. ಈ ಸೇತುವೆಯನ್ನು ರಾಮಸೇತು,  ನಾಲಾ ಸೇತು,  ಎಂಬ ಹೆಸರುಗಳಿಂದ  ಕರೆಯಲಾಗುತ್ತದೆ. ವಾನರ ಸೈನ್ಯವು  ಲಂಕೆಯಿಂದ ಸೀತಾದೇವಿಯನ್ನು ಕರೆತರಲು ಇದನ್ನು ನಿರ್ಮಾಣ ಮಾಡಿದವು. ಶ್ರೀರಾಮನ ವಾನರ ಸೈನ್ಯದಲ್ಲಿದ್ದ  'ನಲ ಮತ್ತು ನೀಲ' ಎಂಬ ವಾನರರ  ನೇತೃತ್ವದಲ್ಲಿ. ನಿರ್ಮಾಣಕಾರ್ಯವನ್ನು ಆರಂಭಿಸಲಾಯಿತು. ನಲ ಮತ್ತು ನೀಲ ಬಹಳ ಬುದ್ದಿವಂತ ಕೋತಿಗಳು. ಇವು ಭಗವಾನ್ 'ವಿಶ್ವಕರ್ಮರ' ಪುತ್ರರಾಗಿದ್ದರು. ಸಹಜವಾಗಿಯೇ ನಿರ್ಮಾಣಕಾರ್ಯಗಳ  ಪರಿಪೂರ್ಣ ಜ್ಞಾನವನ್ನು ಹೊಂದಿದ್ದವು.  ಆದ್ದರಿಂದ  ರಾಮಸೇತುವೆಯ ನಿರ್ಮಾಣ ಕಾರ್ಯವನ್ನು 'ನಲ ಮತ್ತು ನೀಲರು'  ಶ್ರೀರಾಮನ ಅಪ್ಪಣೆಯಂತೆ ಎಲ್ಲಾ ವಾನರ ಸೈನ್ಯ ದೊಂದಿಗೆ ನಿರ್ಮಿಸಲು ಮುಂದಾಗುತ್ತಾರೆ. 

ರಾಮಾಯಣದ ಒಂದು ಕಥೆಯ ಪ್ರಕಾರ ನಲ  ಮತ್ತು ನೀಲರು, ಚಿಕ್ಕಂದಿನಲ್ಲಿ ತುಂಬಾ ತಂಟೆಕೋರ ಕಪಿ ಗಳಾಗಿದ್ದವು. ಕಾಡಿನಲ್ಲಿ ತಪಸ್ಸಿಗೆ ನಿರತರಾಗಿರುತ್ತಿದ್ದ ಋಷಿಮುನಿಗಳ ವಸ್ತುಗಳನ್ನು  ಕದ್ದು ಸಮುದ್ರಕ್ಕೆ ಎಸೆಯುತ್ತಿದ್ದವಂತೆ.  ಸಮುದ್ರದಲ್ಲಿ ಅವು ಮುಳುಗಿ ಹೋಗುತ್ತಿತ್ತು . ಇದರಿಂದ ಋಷಿಮುನಿಗಳ  ನಿತ್ಯ ಕರ್ಮಗಳಿಗೆ ತೊಂದರೆಯಾಗುತ್ತಿತ್ತು.  ಇದರಿಂದ ಕುಪಿತಗೊಂಡ ಋಷಿಗಳು ಅವರಿಗೆ ಶಾಪ ಕೊಟ್ಟರು. " ಮುಂದೆ ನೀವು ಎಸೆದ ಯಾವುದೇ ವಸ್ತುಗಳು ಸಮುದ್ರದಲ್ಲಿ ಮುಳುಗದಿರಲಿ" ಎಂದು. ಹೀಗಾಗಿ ಸಮುದ್ರದಲ್ಲಿ ಸೇತುವೆ ಕಟ್ಟಲು  ನಲ ಮತ್ತು ನೀಲರಿಗಿದ್ದ  ಈ  ಶಾಪವು 
ಸಹಕಾರಿಯಾಯಿತು ಎಂದು ಉಲ್ಲೇಖಿಸಲಾಗಿದೆ. 

ವಾನರರು  ಸಮುದ್ರ ಕ್ಕೆ  ಎಸೆಯುತ್ತಿದ್ದ  ಕಲ್ಲು ಗಳ  ಮೇಲೆ, ಮೊದಲು 'ರಾಮ' ಎಂದು ಬರೆದು ಆಮೇಲೆ ಸಮುದ್ರಕ್ಕೆ. ಎಸೆಯುತ್ತಿದ್ದರು. ಅಂಥ ಕಲ್ಲುಗಳು ಮುಳಗದೆ ಸೇತುವೆ ನಿರ್ಮಾಣಕ್ಕೆ ಅನುಕೂಲವಾಗುತ್ತಿತ್ತು. ಸೇತುವೆಯ ನಿರ್ಮಾಣಕ್ಕೆ ಬೇಕಾದ ಉಳಿದ ವಸ್ತುಗಳಾದ ಮರ ಮತ್ತು ಕಲ್ಲುಗಳನ್ನು ಹೊತ್ತು ತರುತ್ತಿರುವಾಗ  ಶ್ರೀರಾಮನಿಗೆ ಜಯವಾಗಲಿ ಎಂದು ಘೋಷಣೆ ಕೂಗುತ್ತಾ ಅತ್ಯಂತ ಭಕ್ತಿ ಶ್ರದ್ಧೆಯಿಂದ ಸೇತುವೆ ನಿರ್ಮಾಣ ಮಾಡುತ್ತಿದ್ದರು. ಆಧುನಿಕ ಯುಗದಲ್ಲಿ ಸೇತುವೆಯನ್ನು ನಿರ್ಮಿಸಲು  ವರ್ಷಗಳೇ ಬೇಕಾಗುತ್ತದೆ. ಆದರೆ  ತಂತ್ರಜ್ಞಾನವಿಲ್ಲದ  ಆ ದಿನಗಳಲ್ಲಿ ರಾಮಸೇತುವೆ ನಿರ್ಮಾಣಗೊಂಡು  ಕೇವಲ ಐದು ದಿನಗಳಲ್ಲಿ ಪೂರ್ಣಗೊಂಡಿದ್ದು ವಿಶೇಷ. ಈ ಸೇತುವೆಯ  ಯೋಜನೆ  45 ರಿಂದ 48 ಕಿಲೋಮೀಟರ್ ನಷ್ಟು ಉದ್ದವಿದೆ.  

ಹನುಮಂತನಿಗೆ ರಾಮನ ಮೇಲೆ ಎಂತಹ ಭಕ್ತಿಯೆಂಬುದು ಇಲ್ಲಿನ ಒಂದು ಸಂದರ್ಭ ತಿಳಿಸುತ್ತದೆ. ಸೇತುವೆ ನಿರ್ಮಾಣದ ಮೊದಲು ರಾಮನೆ  ಸಮುದ್ರಕ್ಕೆ ಕಲ್ಲು ಹಾಕಿದಾಗ ಅದು ಮುಳುಗಿಹೋಗುತ್ತದೆ.  ರಾಮನ ಬಂಟ ಹನುಮಂತ ಶ್ರೀರಾಮನಿಗೆ,  ಕಲ್ಲಿನ ಮೇಲೆ 'ರಾಮ' ಎಂದು ಬರೆದು ಹಾಕಿದರೆ ಕಲ್ಲು ಎಂದಿಗೂ ಮುಳುಗುವುದಿಲ್ಲ ಎನ್ನುತ್ತಾನೆ. ಇದನ್ನು ಕೇಳಿ ಹನುಮಂತನ ಬಗ್ಗೆ ರಾಮನು ಅವನ ಪ್ರೀತಿಗೆ  ಎಣೆಯೇ ಇಲ್ಲವೆಂದು ಪುಳಕಗೊಳ್ಳುತ್ತಾನೆ. ರಾಮನ ಮೇಲೆ ಹನುಮಂತನಿಗೆ ಭಕ್ತಿ ಎಷ್ಟು ಇತ್ತು ಎಂಬುದನ್ನು  ಈ ಸಂಗತಿ ನಿರೂಪಿಸುತ್ತದೆ.  ಸೇತುವೆ ನಿರ್ಮಾಣದಲ್ಲಿ ವಾನರ ಸೈನ್ಯದ ಕಠಿಣ ಪರಿಶ್ರಮ ವ್ಯರ್ಥವಾಗದೆ ಸುಸೂತ್ರವಾಗಿ ಕಾರ್ಯ ನೆರವೇರಲಿ ಎಂದು ಶ್ರೀರಾಮನು ಋಷಿಮುನಿಗಳಾದ  ಬಕದಾಲ್ಭ್ಯರ ಸಲಹೆಯಂತೆ ವಿಜಯ ಏಕಾದಶೀ ಉಪವಾಸವನ್ನು ಆಚರಿಸುತ್ತಾನೆ. 

ಸಮುದ್ರದ ಮೂಲಕ ವಾನರ ಸೈನ್ಯವನ್ನು ಕೊಂಡೊಯ್ಯಲು, ರಾಮನು ಸಮುದ್ರ ರಾಜನ ಅನುಮತಿಗಾಗಿ,  ಮೂರು ದಿನ ಉಪವಾಸ ಮಾಡಿ ಸಮುದ್ರ ರಾಜನನ್ನು ಪೂಜಿಸುತ್ತಾನೆ. ಆದರೆ ರಾಮನ ಬೇಡಿಕೆಯನ್ನು ತಿರಸ್ಕರಿಸಿದಾಗ ಕೋಪದಿಂದ ಸಿಡಿದೆದ್ದ ರಾಮನು ಸಮುದ್ರದಲ್ಲಿರುವ ಅಪಾರವಾದ  ಜಲರಾಶಿ  ಆವಿಯಾಗಲಿ ಎಂದು ಶಪಿಸಿ ತನ್ನ ಬತ್ತಳಿಕೆಯಿಂದ ಬಾಣ ಬಿಡಲು ಮುಂದಾಗುತ್ತಾನೆ. ಇದರಿಂದ ಭಯಗೊಂಡ ಸಮುದ್ರರಾಜನು ಕೂಡಲೇ ಕೈಮುಗಿದು ಪ್ರಾರ್ಥಿಸಿ ರಾಮನ ಆಣತಿಯನ್ನು ಒಪ್ಪಿಕೊಂಡು, ನನ್ನ ಮೇಲೆ ನೀವು ಸೇತುವೆಯನ್ನು  ನಿರ್ಮಿಸ ಬಹುದು  ನಾನು ನನ್ನೆಲ್ಲಾ ಸಹಕಾರವನ್ನು ನಿಮಗೆ ಕೊಡುತ್ತೇನೆ ಎನ್ನುತ್ತಾನೆ. ಇಷ್ಟೇ ಅಲ್ಲದೆ ಸಮುದ್ರರಾಜನು ಸಲಹೆ ಕೊಡುತ್ತಾನೆ.  ವಾನರ ಸೈನ್ಯದಲ್ಲಿ ನೈಪುಣ್ಯತೆಯ ಅಗಾಧ ಜ್ಞಾನವಿರುವ   ಬುದ್ಧಿವಂತರಾದ ನಳ ಮತ್ತು ನೀಲ ಎಂಬ ವಾನರರ ಮುಂದಾಳತ್ವದಲ್ಲಿ ಸೇತುವೆ ನಿರ್ಮಿಸಿ ಎಂದು ಸಲಹೆ ಕೊಡುತ್ತಾನೆ. ವಾನರ ಸೈನ್ಯ ನನ್ನ ಮೇಲೆ ಹಾಕುವ  ಕಲ್ಲುಗಳು ಚದುರದಂತೆ ಒಂದೆಡೆ ಇರಿಸುವ  ಜವಾಬ್ದಾರಿ ನನ್ನದು ಎಂದು ಭರವಸೆ ನೀಡುತ್ತಾನೆ. ಸಮುದ್ರರಾಜನ ಮಾತುಗಳನ್ನು ಕೇಳಿದ ರಾಮನು ವಾನರ ಸೈನ್ಯಕ್ಕೆ ರಾಮಸೇತುವೆ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿ ಕೊಟ್ಟನು. 

ಸೇತುವೆ ಮುಗಿದ ಬಳಿಕ ಶ್ರೀ ರಾಮನು  ಲಂಕೆಗೆ ಹೋಗುವ ಮೊದಲು ರಾಮೇಶ್ವರದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಅದನ್ನು ಪೂಜಿಸಿ ಹೊರಡುತ್ತಾನೆ. ಹೀಗೆ ರಾಮನಿಂದ  ಪ್ರತಿಷ್ಠಾಪಿಸಲ್ಪಟ್ಟು ,ಪೂಜಿಸಿದ  ಶಿವಲಿಂಗವು 'ರಾಮೇಶ್ವರ' ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆದು ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಪ್ರತಿವರ್ಷ ದೇಶ ವಿದೇಶಗಳಿಂದ  ಲಕ್ಷಾಂತರ ಭಕ್ತರು ಇಲ್ಲಿಗೆ ಬಂದು ರಾಮೇಶ್ವರನ ದರ್ಶನ ಪಡೆದು ಭಕ್ತಿಯಿಂದ ಆರಾಧಿಸಿ ಕೃತಾರ್ಥರಾಗಿದ್ದಾರೆ. 

ಪ್ರಾತಃಸ್ಮರಾಮಿ ರಘುನಾಥ ಮುಖಾರವಿಂದಂ
ಮಂದಸ್ಮಿತಂ  ಮಧುರ ಭಾಷಿ  ವಿಶಾಲ ಭಾಲಂ
ಕರ್ಣಾವ ಲಂಬಿ ಚಲ ಕುಂಡಲ ಶೋಭಿ ಗಂಡಂ
ಕರ್ಣಾಂತ ದೀರ್ಘ ನಯನಂ ನಯನಾಭಿರಾಮಂ! 

ವಂದನೆಗಳೊಂದಿಗೆ,
ಬರಹ:- ಆಶಾ ನಾಗಭೂಷಣ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ