ಗುರುವಾರ, ಏಪ್ರಿಲ್ 7, 2022

ಅತ್ತೆ ತಾಯಿಯಾದಳು -ಸೊಸೆ ಮಗಳಾದಳು :

ಅತ್ತೆ ತಾಯಿಯಾದಳು -ಸೊಸೆ ಮಗಳಾದಳು :- 

ಆ  ಮನೆಯಲ್ಲಿ ಅತ್ತೆ ಮಂಗಳಮ್ಮನಿಗೆ ಸೊಸೆ  ರೇಖಾಳನ್ನು  ಹಾಗೂ ಸೊಸೆಗೆ ಅತ್ತೆಯನ್ನು ಕಂಡರೆ  ಅಷ್ಟಕ್ಕಷ್ಟೇ.  ಮದುವೆಯಾಗಿ ವರ್ಷ ತುಂಬಿದೆ. ಆದರೆ ಸೊಸೆ ಇನ್ನೂ ಮನೆಗೆ ಹೊಂದಿಕೊಂಡಿಲ್ಲ ಎಂಬ ಸಿಟ್ಟು, ಸೊಸೆ ಬೇಗ ಎದ್ದು ಹೊಸಿಲಿಗೆ ರಂಗೋಲಿ, ಗಿಡಗಳಿಗೆ ನೀರು ,ಹೂ ಬಿಡಿಸುವುದು, ನಿತ್ಯ ದೇವರ ಪೂಜೆ , ಶ್ರಾವಣ ಮಾಸದ  ವ್ರತ ಕಥೆ, ಲಕ್ಷ್ಮಿ ಪೂಜೆಗಳನ್ನು  ಮಾಡಲಿ, ಮನೆಗೆ ಬಂದ ಬಂಧುಗಳಿಗೆ ಉಪಚರಿಸಲಿ, ಅತ್ತೆಯ  ಸೇವೆ ಮಾಡಲಿ, ಒಟ್ಟಾರೆ  ಸೊಸೆ ಹೀಗಿರಲಿ ಎಂಬ ಆಸೆ. ಸೊಸೆ  ಸಿಟಿಯಲ್ಲಿ  ಬೆಳೆದವಳು. ಇಬ್ಬರು  ಮಕ್ಕಳಲ್ಲಿ ಇವಳು ಮುದ್ದಿನ  ಹಿರೇಮಗಳು  ಮುಂಚೆ ಏಳುವುದೆಂದರೆ ಆಗದು.  ಅದರಲ್ಲೂ  ಮನೆಕೆಲಸಗಳನ್ನು ಮಾಡಿ  ಗೊತ್ತಿಲ್ಲ. ತೋಟ ಗದ್ದೆಯ, ಗಂಧ- ಗಾಳಿ ಇಲ್ಲ. ಹುಡುಗ ಉನ್ನತ ವ್ಯಾಸಂಗ ಮಾಡಿ, ಸರ್ಕಾರಿ ಕೆಲಸವಿದೆ. ಮನೆ,ಆಸ್ತಿ ಇದೆ. ನೋಡಲು  ಚನ್ನಾಗಿದ್ದಾನೆ. ಹೀಗಂದುಕೊಂಡು ಮಗಳನ್ನು  ಗ್ರಾಮದ  ಊರಿಗೆ  ಮದುವೆ ಮಾಡಿ  ಕೊಟ್ಟಿದ್ದರು. 

ಸೊಸೆ ಯಾವಾಗಲೂ ಹಿಂದಿ, ಇಂಗ್ಲಿಷ್, ಸಿನಿಮಾ  ಧಾರಾವಾಹಿ ನೋಡಲು ಕುಳಿತರೆ ಟಿ.ವಿ ಬಿಟ್ಟೇಳುತ್ತಿರಲಿಲ್ಲ. ಅತ್ತೆಗೆ ಕನ್ನಡ ಸಿನಿಮಾ, ಧಾರವಾಹಿಗಳು,   ರಿಯಾಲಿಟಿ  ಶೋಗಳು, ನೋಡುವುದು ಇಷ್ಟ, ಅದರೀಗ ಅವಕಾಶವೇ ಇಲ್ಲವಾಗಿದೆ. ಮನೆಯಲ್ಲಿ  ಮದುವೆಯಾದ ಇಬ್ಬರು  ಹೆಣ್ಣುಮಕ್ಕಳು ಹಬ್ಬ -ಹುಣ್ಣಿಮೆ ಎಂದು  ತವರುಮನೆಗೆ ಬರುವುದಕ್ಕಿಂತ  ಹೆಚ್ಚಾಗಿ,  ಸೊಸೆಯ ಅಪ್ಪ-ಅಮ್ಮ ಆಗಾಗ್ಗೆ  ಮಗಳನ್ನು ನೋಡಲು ಬರುವುದೇ ಜಾಸ್ತಿಯಾಗಿತ್ತು.  ಮೊದಲೆಲ್ಲಾ  ಹಬ್ಬ ಹುಣ್ಣಿಮೆಗಳು ಬಂದಾಗ  ಮಗ  ಹರ್ಷ ಅಮ್ಮನಿಗೆಂದು ಸೀರೆ ಕೊಡಿಸುವುದು, ಆಗಾಗ್ಗೆ ಸಿನಿಮಾ, ಹೋಟೆಲ್ಲು, ಬಂಧು-ಬಳಗದವರ ಮದುವೆ-ಮುಂಜಿ ಗಳಿಗೆ ಪುಣ್ಯಕ್ಷೇತ್ರಗಳಿಗೆ  ಕರೆದುಕೊಂಡು ಹೋಗುತ್ತಿದ್ದ. ಇತ್ತೀಚಿಗೆ  ಇದೆಲ್ಲ ಕಡಿಮೆಯಾಗಿದೆ. ಹೇಳಲಾಗದ  ಚಿಂತೆಗಳಿಂದ  ಇರಿಸು ಮುರಿಸಂತು ಆಗಿದೆ.  ತಪ್ಪಿಲ್ಲದಿದ್ದರೂ ನೆಪ ಹುಡುಕಿ ಸೊಸೆ  ಮೇಲೆ ಕೋಪ-ತೋರಿಸುತ್ತಿದ್ದಳು. ಮದುವೆಗೂ ಮೊದಲೆಲ್ಲ  ಮಗ ಹರ್ಷ, ಅಮ್ಮ ಇವತ್ತು ಒತ್ತು ಶ್ಯಾವಿಗೆ, ನಾಳೆ  ಸಮೋಸ  ಜಾಮೂನು ಮಾಡಿಕೊಡು, ಹಬ್ಬಗಳು ಬಂದರೆ ಹೋಳಿಗೆ ,ಅಂಬಡೆ,  ಗಸ್ಗಸೆ ಪಾಯಸ ,ಪುಳಿಯೋಗರೆ, ಮಾಡು ಎಂದು ಮೊದಲೇ ಹೇಳುತ್ತಿದ್ದ. ಕೋಡುಬಳೆ, ಚಕ್ಕುಲಿ, ನಿಪ್ಪಟ್ಟು, ಉಂಡೆಗಳು  ಡಬ್ಬಿಗಳಲ್ಲಿ ಇರಲೇಬೇಕಿತ್ತು. ಆದರೆ ಸೊಸೆ ಬಂದ ಮೇಲೆ, ಅದೇನೋ ಸ್ಯಾಂಡ್ವಿಚ್, ಪಾನಿಪುರಿ, ಮಸಾಲೆ ಪುರಿ, ಇವುಗಳನ್ನೇ ಮಾಡಿಕೊಟ್ಟು ಮಗನ
ನಾಲಿಗೆ ರುಚಿ  ಕೆಡಿಸಿದ್ದಾಳೆ  ಅವರ ಅಂಬೋಣ. ಅವನು ಹಾಗೆ ತಾಯಿಯ ಹತ್ತಿರ ಕೇಳುತ್ತಿರಲಿಲ್ಲ. ಹೆಚ್ಚಿನ ಸಮಯ ಮುದ್ದಿನ ಮಡದಿ ಜೊತೆ ಕಳೆಯುತ್ತಿದ್ದನು.  ಈಗೀಗ  ಅತ್ತೆಗೆ ಅಡುಗೆ ಮನೆಯಲ್ಲಿ  ನಿಲ್ಲುವುದೋ,  ಪಡಸಾಲೆಯಲ್ಲಿ ಕೂರುವುದೋ ಒಂದೂ ತಿಳಿಯುತ್ತಿರಲಿಲ್ಲ . 

ಸೊಸೆಗೂ ಹಾಗೆ ಆಗಿತ್ತು. ಬೆಳಿಗ್ಗೆ  ಗಂಡ  ಕಚೇರಿಗೆ ಹೋದರೆ ಬರುವುದು ಸಂಜೆ,  ಅಲ್ಲಿ ತನಕ  ಅತ್ತೆಯ ಜೊತೆ ಇರಬೇಕು.  ಅದು ಮುಟ್ಟಿದರೆ ತಪ್ಪು ಇದು ಹಿಡಿದರೆ ತಪ್ಪು, ಇದನ್ನು ಹಾಗೆ ಮಾಡು, ಅದನ್ನು ಹೀಗೆ ಮಾಡು.
ಮಾಡು. ಏನಾದರೂ ವಟಗುಟ್ಟುತ್ತಲೇ ಇರುತ್ತಾರೆ ಎಂದುಕೊಳ್ಳುತ್ತಿದ್ದಳು. ತವರು ಮನೆಯಲ್ಲಿ ಎಷ್ಟು ಹಾಯಾಗಿದ್ದೆ.  ಫ್ರೆಂಡ್ಸು, ಪಾರ್ಕು, ದೊಡ್ಡ ದೊಡ್ಡ ಹೋಟೆಲ್ಲು, ಸ್ಟ್ರೀಟ್ ಗಳಲ್ಲಿ ಮಾಡುವ ಬೋಂಡಾ, ಅಂಬಡೆ, ಬಜ್ಜಿ, ಪಾಪ್ಕಾರ್ನ್, ಪಾನಿಪುರಿ, ಬೇಕು ಬೇಕಾದ  ಬಟ್ಟೆ, ಸ್ಲಿಪ್ಪರ್, ಮೇಕಪ್ ಸೆಟ್  ಖರೀದಿಸುತ್ತಿದ್ದಳು, ಇಲ್ಲಂತೂ, ಬಟ್ಟೆ ಖರೀದಿಸುವುದಕ್ಕೆ ಹಬ್ಬವೇ ಬರಬೇಕು. 

ಮನೆಗೆ ಯಾರೇ ಬರಲಿ, ಹೋಮ, ಹವನ ,ಪೂಜೆ,  ವ್ರತ-ಕಥೆಗಳಿಗೆ ಕರೆಯುತ್ತಿದ್ದರು. ಅಲ್ಲಿಗೆ ಹೋದರೆ, ರಂಗೋಲಿ ಹಾಕು, ಹೂ ಕಟ್ಟು,ವಿಳ್ಳೆದೆಲೆ  ಪಟ್ಟಿಮಾಡು, ಅಡಿಕೆ ಕುಟ್ಟು, ಬಂದವರಿಗೆ ಅರಿಶಿನ-ಕುಂಕುಮ ಕೊಡು, ಬಾಳೆಎಲೆ ಸರಿ ಮಾಡು, ಇವೆಲ್ಲ ಇರಲಿ ಬಡಿಸುವಾಗಂತೂ ಪಾಯಸ ಇಲ್ಲಿ ಹಾಕಬೇಕು, ಕೋಸಂಬರಿ ಅಲ್ಲೇ ಹಾಕಬೇಕು, ಪಲ್ಯಗಳನ್ನು 
ಈ ಬದಿ ಹಾಕಬೇಕು, ಎಲೆಯ ಮುಂದೆ ರಂಗೋಲಿ ಹಾಕಬೇಕು, ಈ ತರಹದ್ದು ಮುಗಿಯುತ್ತಲೇ ಇರಲಿಲ್ಲ.  ಸ್ವಲ್ಪ ತಪ್ಪಾದರೂ, ಅಯ್ಯೋ ಅದು ಹಾಗಲ್ಲ ಇದು ನಿನಗೆ ಗೊತ್ತೇ ಇಲ್ಲವೇ ಎನ್ನುತ್ತಿದ್ದರು. ಆದರೆ ನಿಜಕ್ಕೂ ಗೊತ್ತಿರಲಿಲ್ಲ. ಅಮ್ಮನ ಮನೆಯಲ್ಲಿ  ತಟ್ಟೆಯಲ್ಲಿ ಹಾಕಿ ಕೊಟ್ಟಿದ್ದನ್ನು, ತೊಡೆಯ ಮೇಲೆಟ್ಟುಕೊಂಡು ತಂದೆಯ ಜೊತೆ ಹರಟುತ್ತಾ, ಟಿವಿ ನೋಡುತ್ತಾ  ತಂಗಿ ಜೊತೆ ಕೀಟಲೆ ಮಾಡುತ್ತಾ ಊಟ ಮಾಡುತ್ತಿದ್ದಳು.  ಅವರಿವರ ಮದುವೆ, ಮುಂಜಿಗಳಿಗೆ ಹೋದಾಗ ಎಲೆ ಊಟ ನೋಡಿದ್ದಳು. ಅವಳ ತಂದೆಯದು ದೊಡ್ಡ ಹುದ್ದೆ, ಶಿಸ್ತುಬದ್ಧ ಜೀವನ, ತಾಯಿ ಹೈ ಸ್ಕೂಲ್ ಟೀಚರ್, ಕೆಲಸಗಳಿಗೆ ಹೊಂದಿಸಿ ಕೊಳ್ಳುವಂತೆ ಮನೆಯನ್ನು ಸುಧಾರಿಸಿಕೊಂಡು ಹೋಗುತ್ತಿದ್ದರು. ಈಗ ಇಬ್ಬರೂ ರಿಟೈರ್ಡ್. ಮನೆಯಲ್ಲಿ ಮೊದಲಿನಂತೆ ನಡೆದಿತ್ತು. ಬೆಂಗಳೂರಿನಂಥ ಮಹಾನಗರದಲ್ಲಿ  ನೋಡದಿರುವ ಜಾಗವಿಲ್ಲ, ಹೋಗದಿರುವ ಪ್ರವಾಸಗಳಿಲ್ಲ, ಗಂಡನ ಮನೆ ಕಟ್ಟಿ ಹಾಕಿದಂತಾಗಿದೆ. 

ಒಮ್ಮೆ ರೇಖಾಳ ತಂದೆ-ತಾಯಿ  ಕಾಶಿ, ರಾಮೇಶ್ವರ, ಚಾರ್ ಧಾಮ್ ಯಾತ್ರೆಗೆ, ಹೊರಟಿದ್ದು, ಜೊತೆಗೆ ಮಗಳನ್ನು ಬರುವಂತೆ ಕರೆದರು. ಒಂದೆರಡು ತಿಂಗಳು ಇರುವಂತೆ ಬೆಂಗಳೂರಿಗೆ ಬಂದಳು. ಆದರೆ ಪ್ರವಾಸ ಮುಂದೂಡಲಾಯಿತು. ಹೇಗೂ ಬಂದಿದ್ದೀಯಾ ಒಂದು ತಿಂಗಳು ಇದ್ದು ಹೋಗು ಎಂದು ತಂದೆ ತಾಯಿ ಹೇಳಿದ ಮಾತಿಗೆ ಅಲ್ಲೇ ಉಳಿದಳು. ತಾಯಿ ಹತ್ತಿರ ಗಂಡನ ಮನೆ ವಿಚಾರ ಅತ್ತೆ ವಿಚಾರ ಎಲ್ಲ ಹೇಳಿದಳು. ಅತ್ತೆಯ ಕಿರಿಕ್  ಬಿಟ್ಟರೆ  ಇನ್ನೆಲ್ಲಾ ಚೆನ್ನಾಗಿದೆ ಎಂದಳು. ಅಂದು ತಾಯಿಯ ಬಾಲ್ಯದ ಗೆಳತಿ, ಡಾ. ಕೌಸಲ್ಯಾ ಬಾಯಿ  ಮನೆಗೆ ಬಂದರು. ಗೆಳತಿಯರು ಎಲ್ಲಾ ವಿಚಾರಗಳನ್ನು ಮಾತಾಡುವಾಗ, ಗಂಡನ ಮನೆಯಲ್ಲಿ ಮಗಳು ಹೇಗಿದ್ದಾಳೆ ಎಂದು ಕೇಳಿದ್ದಕ್ಕೆ, ಗೆಳತಿ, ಫ್ಯಾಮಿಲಿ ಡಾಕ್ಟರು ಆಗಿರುವುದರಿಂದ, ಹುಡುಗಿಯ ಅಮ್ಮ ಎಲ್ಲವನ್ನೂ ಹೇಳಿದರು. ಆಗ ಡಾಕ್ಟರ್  ಒಂದು  ಸಲಹೆ ಕೊಡುತ್ತೇನೆ. ಕೆಲವೇ ದಿನಗಳಲ್ಲಿ  ಸುಧಾರಿಸುತ್ತದೆ. ಒಂದು ವಿಷಯ ನೀವು ಗಂಡ, ಹೆಂಡತಿ  ಮಗಳ ಮನೆಗೆ  ಹೆಚ್ಚು ಹೋಗಬೇಡಿ. 

ಅವಳಿಗೆ  ಗಂಡನ ಮನೆ ಹೊಸದು, ಹೊಂದಿಕೊಳ್ಳುವುದು ಕಷ್ಟವಾಗಿರುತ್ತದೆ.ಗ್ರಾಮಗಳಲ್ಲಿ ಇರುವ ಕುಟುಂಬದವರು ಮನೆ-ಮಕ್ಕಳು ಹಬ್ಬ-ಹುಣ್ಣಿಮೆ ಹೀಗೆ ಜಾಸ್ತಿ ಹಚ್ಚಿಕೊಂಡಿರುತ್ತಾರೆ. ಪಟ್ಟಣದಲ್ಲಿರುವವರ ಹಾಗೆ ಶಾಪಿಂಗು, ಪ್ರವಾಸ, ಎಂದು  ಹತ್ತಾರು ಕಡೆ ಸುತ್ತುವರಲ್ಲ. ಮನೆಯೇ  ಎಲ್ಲಾ ಆಗಿರುತ್ತದೆ. ಕ್ರಮೇಣ ಹೊಂದಿಕೆಯಾಗುತ್ತದೆ ಕಾಯಬೇಕು. ನಿನ್ನ ಮಗಳನ್ನು  ಕ್ಲಿನಿಕ್ಕಿಗೆ ಕಳಿಸು ಎಂದು ಹೇಳಿ ಹೊರಟರು. ಕ್ಲಿನಿಕ್ಕಿಗೆ ಬಂದ ರೇಖಾ ಎಲ್ಲವನ್ನು ಹೇಳುವುದು ಬೇಡವೋ ಎಂದು ಯೋಚಿಸುತ್ತಾ  ಡಾಕ್ಟರರನ್ನು ನೋಡಿದಳು. ಹಿರಿಯ ಅನುಭವಿ  ಆಯುರ್ವೇದಿಕ್ ಡಾಕ್ಟರ್ ,ಮಾತೃ ವಾತ್ಸಲ್ಯ ಮೂಡುವಂಥ ಅವರ ಉಡುಗೆ ತೊಡುಗೆ, ನಿಧಾನ ಮಾತು, ನೋಡಿ ಮುಚ್ಚುಮರೆಯಿಲ್ಲದೆ  ಎಲ್ಲವನ್ನು ಹೇಳಿದಳು. 

ನಿಧಾನವಾಗಿ ಎಲ್ಲವನ್ನು ಕೇಳಿದ  ಡಾ.ಕೌಸಲ್ಯ ಬಾಯಿ. ನೋಡು ಮಗಳೇ ನೀನು ಸ್ವಲ್ಪ ತಾಳ್ಮೆಯಿಂದ ಇದ್ದರೆ ಎಲ್ಲವೂ ಚೆನ್ನಾಗಿ ಆಗುತ್ತದೆ. ನಿಮ್ಮ ಅತ್ತೆ ಸ್ವಲ್ಪ ಹಿಂದಿನವರು. ಅಲ್ಲದೆ ವಯಸ್ಸಾಗುತ್ತಾ ಬಂದ ಹಾಗೆ, ಮಾನಸಿಕವಾಗಿ ತಡೆದುಕೊಳ್ಳುವ ಶಕ್ತಿ ಇರುವುದಿಲ್ಲ .ಹಳ್ಳಿಯಲ್ಲಿ ಇರುವವರು ಮಕ್ಕಳ ಮೇಲೆ ಜೀವವನ್ನೇ ಇಟ್ಟಿರುತ್ತಾರೆ.  ಅಂದಹಾಗೆ ನಿಮ್ಮ ಅತ್ತೆಗೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಇದೆಯೇ? ಎಂದು ಕೇಳಿದಾಗ, ಅಂಥದ್ದೇನೂ ಇಲ್ಲ. ಬಿ.ಪಿಗೆ ಮಾತ್ರೆ ತೆಗೆದುಕೊಳ್ಳುತ್ತಾರೆ, ಬಾಕಿಯಂತೆ ಆಗಾಗ್ಗೆ  ಬೆನ್ನು, ಮೊಣಕಾಲು ನೋವು,  ಎನ್ನುತ್ತಾರೆ ಎಂದಳು. ಮುಂದುವರಿಸಿದ ಡಾಕ್ಟರ್  ನಾನು ಕೆಲವೊಂದು ಸಲಹೆ ಕೊಡುತ್ತೇನೆ ಅದರಂತೆ ಮಾಡು. ನಿಮ್ಮ ಅತ್ತೆಗೆ ನೋವು  ಕಡಿಮೆಯಾಗುವ ವಿಟಮಿನ್ ಪೌಡರ್ ಕೊಡುತ್ತೇನೆ. ನಿತ್ಯ ರಾತ್ರಿ ಒಂದು ಲೋಟ ಹಾಲಿಗೆ  1 ಸ್ಪೂನ್  ಹಾಕಿ ಕುಡಿಯಲು  ಕೊಡು ಆಗ  ಸುಖವಾಗಿ ನಿದ್ದೆ ಮಾಡುತ್ತಾರೆ. ಮನಸ್ಸು ಹಗುರಾಗುತ್ತದೆ.  ತಾಳ್ಮೆಯಿಂದ  ಸ್ವಲ್ಪ ದಿನಗಳು ಮಾಡಬೇಕು. ಅವರು ಹೇಳಿದ್ದನ್ನು  ಅನುಸರಿಸಬೇಕು  ಅವರಿಂದ ಅಡಿಗೆ, ತಿಂಡಿಗಳನ್ನು ಕಲಿಯುವುದು,  ದೇವಸ್ಥಾನ, ಪಾರ್ಕು, ಸಣ್ಣಪುಟ್ಟ ಪ್ರವಾಸ, ಭಜನಾ ಮಂಡಳಿಗಳಿಗೆ  ಕರೆದುಕೊಂಡು ಹೋಗಿ ಅವರಿಗೆ ಅಭ್ಯಾಸ ಮಾಡಿಸು. ಬರಬರುತ್ತಾ ಅವರಿಗೂ ಹೊಂದಿಕೆಯಾಗುತ್ತದೆ ನಿನಗೂ ಸರಿಹೋಗುತ್ತದೆ 
ಹೀಗೆ ಎಲ್ಲವನ್ನೂ  ತಿಳಿಸಿದರು. 

ರೇಖಾಗೆ ಗಂಡನ ಮನೆ ಬಿಟ್ಟು ತವರಿಗೆ ಬಂದಮೇಲೆ, ಪ್ರವಾಸವು ಇಲ್ಲ. ಗಂಡನನ್ನು ಬಿಟ್ಟು ಇರುವುದು ಅವಳಿಗೆ ಹಿಂಸೆಯಾಗಿತ್ತು. ಊಟ ತಿಂಡಿ ಏನೂ ಬೇಡವಾಯಿತು. ಯಾವಾಗಲೂ ಗಂಡ ಹರ್ಷನ ನೆನಪೇ ಬರುತ್ತಿತ್ತು. ಈ ಕಡೆ ಅವಳ  ಅತ್ತೆಗೆ ಒಂದು ವಾರದ ತನಕ ಏನು ಅನ್ನಿಸಲಿಲ್ಲ ಮಗನಿಗೆ ಅಡಿಗೆ ತಿಂಡಿ ಮಾಡಿಕೊಟ್ಟು ಸಂತೋಷವಾಗಿದ್ದರು. ಆದರೆ ಜೀವನ ಸಪ್ಪೆ ಅನಿಸಿತು.  ಗಳಾಬಿಳಿಯಾಗಿ ಓಡಾಡುತ್ತಾ  ಟಿವಿ ನೋಡುತ್ತಾ, ಹಾಡು ಗುಣುಗುಣಿಸುತ್ತಾ ಸೊಸೆ ಮನೆತುಂಬಾ ಓಡಾಡಿ ಕೊಂಡಿದ್ದಳು. ಮಗ ಮನೆಗೆ ಬರುವ ಹೊತ್ತಿಗೆ,  ಹೊಸ ಹೊಸ ತಿಂಡಿ  ಮಾಡಿ ಕಾಯುತ್ತಿದ್ದಳು. ಮಗನು ಮೊದಲಿನ  ಹಾಗೆ ತಾಯಿ ಹತ್ತಿರ ಅದು, ಇದು ಕೊಡು  ತರಲೆ, ಕೀಟಲೆ ಯಾವುದು ಇರಲಿಲ್ಲ ಅವನಾಯಿತು ಫೋನ್ ಆಯ್ತು, ಕೆಲಸವಾಯಿತು. ಹೀಗಿದ್ದಾಗ,  ಸೊಸೆಯ ಮೇಲೆ  ನಾನು ತುಂಬಾ ಒತ್ತಡವನ್ನು ಹೇರಿದೆನೇ  ಎಂಬ ಅಳುಕು ಕಾಡಿತು. ನಾನೇ ಸರಿ ಮಾಡಿಕೊಳ್ಳಬೇಕು, ಎಲ್ಲರ ಯೋಚನೆ ಹೀಗೆ  ಸಾಗಿರುವಾಗ ಸೊಸೆಯು ತನ್ನ ಗಂಡನಿಗೆ ಫೋನ್ ಮಾಡಿ ಕರೆಸಿಕೊಂಡು  ಹರ್ಷನ  ಜೊತೆ  ಬಂದಳು. 

ಮತ್ತೆ ಮನೆ ತುಂಬಿದಂತಾಯಿತು. ಡಾಕ್ಟರ್ ಹೇಳಿದಂತೆ ಪ್ರತಿನಿತ್ಯ ಅತ್ತೆಗೆ ಪೌಡರ್ ಕೊಟ್ಟಳು. ಊರಿಂದ ಬರುವಾಗ ಅವರಿಗಾಗಿ ಒಳ್ಳೆಯ 2 ಸೀರೆ,ಹೊದೆಯಲು ಶಾಲು, ಅವರು ಇಷ್ಟಪಡುವ ಒಂದಷ್ಟು ತಿಂಡಿಗಳು, ಎಲ್ಲವನ್ನು 
ತಂದಿದ್ದಳು. ಇದನ್ನೆಲ್ಲಾ ನೋಡಿ  ಅತ್ತೆಗೆ ಮುಖ ಅರಳಿತು. ತೋರ್ಪಡಿಸದೆ  ಅದೇನು ನಿಮ್ಮಪ್ಪ ಅಮ್ಮನ ಜೊತೆ ಪ್ರವಾಸ ಹೋಗದೆ  ಇಷ್ಟು ಬೇಗ ಬಂದು ಬಿಟ್ಟೆಯಲ್ಲ ಎಂದರು. 'ಯಾಕೆ ಬರಬಾರದಿತ್ತೆ' ಕೇಳಬೇಕು ನಾಲಿಗೆ ತುದಿಯಲ್ಲಿ ಬಂದಿತ್ತು. ಆದರೂ ತಡೆದುಕೊಂಡು,  ಅಲ್ಲಲ್ಲೆ  ಕರೊನ ಇದೆ  ಅಷ್ಟು ದೂರದ ಪ್ರವಾಸ  ಈಗ  ಬೇಡ ಎಂದು ಮುಂದೆ ಹಾಕಿದರು. ಅವಳ ತಾಳ್ಮೆಯ ಮಾತು ಕೇಳಿ ದೇವರೇ ನಾನೆ  ಒರಟಾಗಿ ಮಾತನಾಡಿದೆನೆ  ಎಂದುಕೊಂಡರು. ಸೀದಾ  ಕೋಣೆಗೆ ಹೋದರು. ಎರಡು ಸೀರೆಗಳನ್ನು ನೋಡಿಕೊಂಡರು ತುಂಬಾ ಚೆನ್ನಾಗಿತ್ತು. ಶಾಲಂತೂ ಒಳ್ಳೆ ಮೊಲದ ಮರಿಯ ಹಾಗೇ ಮೃದುವಾಗಿತ್ತು. ತಿಂಡಿಗಳನ್ನು ನೋಡಿ ಆಸೆಯಾಯಿತು. ವಯಸ್ಸಾಗುತ್ತಾಗುತ್ತಾ ತಿನ್ನುವ ಚಪಲ ಜಾಸ್ತಿ ಆಗುತ್ತೆ ಎಂದು ಹಿರಿಯರು ಹೇಳಿದ್ದು ಸುಳ್ಳಲ್ಲ ಎಂದುಕೊಂಡು ತಮಗೆ ತಾವೇ ನಕ್ಕರು. 

ಡಾಕ್ಟರ್ ಕೌಸಲ್ಯ ಬಾಯಿ ಹೇಳಿದಂತೆ, ಎಲ್ಲವೂ ವ್ಯವಸ್ಥಿತವಾಗಿ ನಡೆಯುತ್ತಿತ್ತು.ಒಂದು ತಿಂಗಳಲ್ಲೆ  ಅತ್ತೆ-ಸೊಸೆಯರಲ್ಲಿ  ಸಾಕಷ್ಟು ಬದಲಾವಣೆ ಕಂಡಿತು. ತಂದೆ ತಾಯಿ ಬರುವುದು, ದಿನವೂ ಗಂಟೆ ಘಡಿಯ ಫೋನ್ ಮಾಡುವುದು ಕಡಿಮೆಯಾಗಿತ್ತು. ಆ ವೇಳೆಗೆ ಶ್ರಾವಣ ಮಾಸ ಬಂದಿತು.  ತಾಯಿ ಮನೆಗೆ ಹೋಗುತ್ತೇನೆ ಎಂದು ತಯಾರಿ ಮಾಡಿಕೊಳ್ಳಲು ಹೊರಟ ಸೊಸೆಗೆ, ನೋಡಮ್ಮ  ಶ್ರಾವಣದಲ್ಲಿ  ಭೀಮನ ಅಮಾವಾಸ್ಯೆ, ಮಂಗಳಗೌರಿ ವ್ರತ, ನಾಗರ ಪಂಚಮಿ, ಹಬ್ಬಗಳನ್ನು ಮಾಡಿಕೊಂಡು ಗೌರಿ ಹಬ್ಬಕ್ಕೆ ಹೋಗಿ ಬರುವಿಯಂತೆ ಈ ಮನೆಯಲ್ಲೂ  ವ್ರತ ಗಳನ್ನು ಮಾಡಿದಂತಾಗುತ್ತದೆ. ದೇವಸ್ಥಾನದ  ಪುರೋಹಿತರಿಗೆ ಹೇಳುತ್ತೇನೆ. ಯೋಚಿಸಿ ಹೇಳು ಹೇಗಾದರೂ ಸರಿ ಎಂದರು. ರೇಖಾಗೂ  ಮನಸ್ಸಿನಲ್ಲಿ  ಈಗ ಹೋದರೆ ಗೌರಿಹಬ್ಬ ಮುಗಿಸಿ ಬರುವುದು  ಒಂದುವರೆ ತಿಂಗಳ ಹತ್ತಿರ ಆಗುತ್ತದೆ ಎಂದುಕೊಂಡಿದ್ದಳು. ಅತ್ತೆ ಹೇಳಿದ ಮೇಲೆ  ನೀವು ಹೇಳಿದಂತೆ ಆಗಲಿ ಎಂದಳು. ಮಂಗಳಮ್ಮನಿಗೆ  ತನ್ನ ಸೊಸೆ ಹೇಳಿದ ಹಾಗೆ ಕೇಳುತ್ತಾಳೆ ಎಂದು ಇನ್ನೂ ಅಭಿಮಾನ ಹೆಚ್ಚಿತು.  ಡಾಕ್ಟರ್ ಕೌಸಲ್ಯ ಬಾಯಿ ಸಲಹೆ ಗಳನ್ನು ಅನುಸರಿಸಿದ ಮೇಲೆ ಎರಡು ಕುಟುಂಬದಲ್ಲಿ ಶಾಂತಿ ನೆಲೆಸಿ  ಅತ್ತೆ ತಾಯಿಯಾದರೆ, ಸೊಸೆ  ಮಗಳಾದಳು. 

ಹಿಂದೆ  'ತರಂಗ' ಸಂಪಾದಕೀಯದಲ್ಲಿ  ಸಂಧ್ಯಾ ಪೈಯವರು  ಬರೆದ  ಆಧಾರ. 

ಅಹಂಮಮಾಭಿ ಮಾನೋತ್ಥೈ, ಕಾ ಮಲೋಭಾದಿಭಿರ್ಮಲೈ!
ವೀತಂ  ಯದಾ  ಮನ , ಶುದ್ಧಮ ದುಃಖಮ ಸುಖಂ ಸಮಮ್! 

ನಾನು, ನನ್ನದು ಎಂಬ ಅಭಿಮಾನದಿಂದುಂಟಾದ,  ಕಾಮ, ದುರಾಸೆ, ಮೊದಲಾದ ಕೋಣೆಗಳಿಂದ ಮನಸ್ಸು ಯಾವಾಗ ಬಿಡಲ್ಪಟ್ಟು  ಶುದ್ಧವಾಗುತ್ತದೋ ಆಗ  ಸುಖವಾಗಲಿ, ದುಃಖವಾಗಲಿ,  ಸಮವೆನಿಸುತ್ತದೆ. 

ವಂದನೆಗಳೊಂದಿಗೆ,
ಬರಹ:- ಆಶಾ ನಾಗಭೂಷಣ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ