ಗುರುವಾರ, ಏಪ್ರಿಲ್ 7, 2022

ಭಯಂಕರ ಆಣೆ, ಶಾಪಗಳು :-

ಭಯಂಕರ  ಆಣೆ, ಶಾಪಗಳು :- 

ರಾಕ್ಷಸರು  ಹುಟ್ಟಿನ ಜೊತೆಯಲ್ಲಿಯೇ, ದೇವತೆಗಳು  ಮನುಷ್ಯರಾಗಿ  ಜನ್ಮ ತಾಳಿದರು.  ಇಂತಹ ಶಕ್ತಿಗಳನ್ನು  ಸಂಹರಿಸಲು ಪ್ರಬಲ ಶಕ್ತಿಯೇ  ಬೇಕು. ಆಗ  ಭಗವಂತನು ಅವತರಿಸುವನು.  ಸೃಷ್ಟಿಯ ಸಮತೋಲನವನ್ನು ಕಾಪಾಡಲು  ಕರ್ಮ ಮಾಡುವುದು, ಕರ್ಮ ಮಾಡುವ ಅನಿವಾರ್ಯವಾಗಿ ಸಮಸ್ಯೆಗಳು ಪರಿಹಾರ, ಆಣೆ, ಪ್ರಮಾಣ, ಶಪತ, ಶಾಪ, ಪಾಪ ಪುಣ್ಯ,ದಿಂದ  ಸಿಗುವ  ಫಲಾಫಲಗಳನ್ನು ಸ್ವೀಕರಿಸುವುದು. ಇದು ಜಗದ ನಿಯಮ. ನಾವು ನಿಮಿತ್ತ ಮಾತ್ರ ಸೂತ್ರಧಾರ  ಭಗವಂತ. 

ವಾಲ್ಮೀಕಿಗಳು ರಾಮಾಯಣ ಬರೆಯಲು ಒಂದು ಶಾಪದ ಘಟನೆ ಕಾರಣವಾಗುತ್ತದೆ.  ಒಂದು ಮುಂಜಾನೆ ತಮಸಾ ನದಿಗೆ  ಸ್ನಾನಕ್ಕೆ ಹೋದಾಗ, ವಾತಾವರಣ  ಆಹ್ಲಾದವಾಗಿರುತ್ತದೆ. ಹಕ್ಕಿಗಳ ಕಲರವ, ಸುಖದಲ್ಲಿದ್ದ  ಗಂಡು-ಹೆಣ್ಣು ಕ್ರೌಂಚಪಕ್ಷಿಗಳೆರಡು  ಚಿಲಿಪಿಲಿ ಗುಟ್ಟುತ್ತ  ಸಂತೋಷದಲ್ಲಿರುವುದನನ್ನು ನೋಡಿದ  ವಾಲ್ಮೀಕಿಗಳು  ಆನಂದವನ್ನು  ಆಸ್ವಾದಿಸುತ್ತಿದ್ದ  ಕ್ಷಣ. ಬೇಡನೊಬ್ಬ ಗಂಡು ಪಕ್ಷಿಗೆ ಬಾಣ ಬಿಡುತ್ತಾನೆ. ಅದು ಪ್ರಾಣ ಬಿಡುತ್ತದೆ. ಹೆಣ್ಣು ಪಕ್ಷಿಯ  ನೋವಿನ ಆಕ್ರಂದನ ವಾಲ್ಮೀಕಿಗಳಿಗೆ  ಸಹಿಸಲಾಗಲಿಲ್ಲ  ತಕ್ಷಣ, ' ನಿನಗೆ  ನಿಲ್ಲಲು  ಎಲ್ಲಿಯೂ  ನೆಲೆ ಸಿಗದಿರಲಿ' ಎಂದು ಬೇಡನಿಗೆ  ಶಾಪ ಕೊಡುತ್ತಾರೆ. ಈ ಘಟನೆ ಮುಂದೆ ರಾಮಾಯಣ ಬರೆಯಲು ಕಾರಣವಾಗುತ್ತದೆ. ಹಾಗೆಯೇ ದಶರಥನಿಗೆ ಶ್ರವಣಕುಮಾರನ  ಹೆತ್ತವರ  ಶಾಪ.  ಮುಂದೊಂದು ದಿನ ದಶರಥ  ಪತ್ನಿ  ಕೈಕೆಯ  ಧೈರ್ಯ ಜಾಣ್ಮೆ ಗೆ  ಮೆಚ್ಚಿ ಕೊಟ್ಟ ಎರಡು ವರಗಳೇ  ಅವನಿಗೆ ಮುಳುವಾಗುತ್ತದೆ.  ಇದು ರಾಮಾಯಣಕ್ಕೆ ತಿರುವು ಕೊಡುತ್ತದೆ. 

ಶಾಪಗಳ ಜೊತೆ ಭಯಂಕರ ಆಣೆಗಳು ಇದ್ದವು.  ತಾಯಿ ಕೈಕೆಯ ಆಸೆಯಂತೆ ರಾಮ, ಸೀತೆ, ಲಕ್ಷ್ಮಣ, ಹದಿನಾಲ್ಕು ವರ್ಷಗಳು ವನವಾಸಕ್ಕೆ ಹೋಗುತ್ತಾರೆ. ವನವಾಸಕ್ಕೆ ಹೋಗಿ  ಒಂದೆ ವಾರದಲ್ಲೇ ಬಳಲಿದ ದಶರಥ ಸ್ವರ್ಗಸ್ಥನಾದನು.  ಭರತ  ಬರುತ್ತಾನೆ. ತನ್ನ ತಾಯಿ  ಕೈಕೆಯ ಕೆಟ್ಟನಡೆಯಿಂದಾಗಿ  ರಾಮನ ವನವಾಸ, ತಂದೆಯ ಸಾವು ಆಗಿದ್ದೆಂದು  ಭರತನಿಗೆ ತಿಳಿಯುತ್ತದೆ.  ಯಾವುದೇ ಕೆಟ್ಟ ತಾಯಿಯೂ ಸಹಿಸಿಕೊಳ್ಳಲಾರದಷ್ಟು, ತನ್ನ ತಾಯಿ ಕೈಕೆಯನ್ನು ತೀವ್ರವಾಗಿ ಖಂಡಿಸುತ್ತಾನೆ. ನೋವು, ದುಃಖ, ಹತಾಶೆ, ಅವಮಾನ ಹಾಗೂ  ಬಹಳ ಹೆದರಿಕೆಯಿಂದ  ತಾಯಿ ಕೌಸಲ್ಯೆ ಇದ್ದಲ್ಲಿಗೆ ಬರುತ್ತಾನೆ. ಭರತನನ್ನು  ನೋಡಿದ  ಕೌಸಲ್ಯೆ  ಅನುಮಾನದಿಂದ, "ಭರತ ಮಹಾರಾಜರು ಬರಬೇಕು ತಮ್ಮ ತಾಯಿ ಕೊಡಿಸಿದ ರಾಜ್ಯವನ್ನು ಚೆನ್ನಾಗಿ ಪಾಲನೆ ಮಾಡಿರಿ. ನಾನು ನನ್ನ ಮಗ ರಾಮನ ಜೊತೆ ಇರುವಂತೆ ದಯವಿಟ್ಟು ವ್ಯವಸ್ಥೆ ಮಾಡಿ, ಇಲ್ಲವೇ  ನಾವೇ   ಹೊರಡುತ್ತೇವೆ  ಎಂದಳು." ಈ ಮಾತುಗಳನ್ನು ಕೇಳಿ ಭರತನಿಗೆ  ಯಾರೊ ಕಾದ ಸೀಸವನ್ನು  ಕಿವಿಗೆ  ಸುರಿದಂತಾಯಿತು.  ತಾನು ತಿಳಿದುಕೊಂಡಂತೆ  ಆಗಿದೆ.  ತನ್ನ ಮೇಲೆ ತಾಯಿ ಕೌಸಲ್ಯೆಗೆ ಅನುಮಾನ ಇದೆ ಎಂಬುದು ಗೊತ್ತಾಯಿತು. 

ರಾಮಚಂದ್ರನನ್ನು ಕಾಡಿಗೆ ಕಳಿಸುವ ಪಿತೂರಿಯಲ್ಲಿ ತನ್ನ ಪಾತ್ರವೇನೂ ಇರಲಿಲ್ಲ ಎನ್ನುವುದನ್ನು ಸಾಬೀತುಪಡಿಸಲು ತಾಯಿ ಕೌಸಲ್ಯೆ  ಮುಂದೆ ಮಂಡಿಯೂರಿ ಕುಳಿತು ಆಣೆಗಳನ್ನು ಮಾಡುತ್ತಾನೆ.  ಮಾತೆ, ನನ್ನ ಪಿತೂರಿಯಿಂದ ರಾಮನು  ಕಾಡಿಗೆ ಹೋಗಿದ್ದೆ ಆದಲ್ಲಿ, ನಾನು ಅಭ್ಯಾಸ ಮಾಡಿದ ಗ್ರಂಥ ಶಾಸ್ತ್ರ, ಶಸ್ತ್ರಾಸ್ತ್ರಗಳ  ವಿದ್ಯೆಗಳು ನನ್ನ  ಸಮಯಕ್ಕೆ ಬರದೆ ಬುದ್ಧಿ  ಓಡದಿರಲಿ, ಪಿತೂರಿಯಲ್ಲಿ ನಾನಿದ್ದರೆ, ಪಾಪಿಷ್ಠರು ನೀಚರ  ಬಳಿ  ಇರುವಂತೆ  ಗತಿ ಬರಲಿ, ಹಸುಗಳನ್ನು ಕಾಲಿನಿಂದ ಒದೆಯುವ ಬುದ್ಧಿ ಬರಲಿ, ನನ್ನ ತಪ್ಪು ಇದ್ದರೆ, ಒಳ್ಳೆಯ ರಾಜನಿಗೆ ದ್ರೋಹ ಮಾಡುವ ಕೆಟ್ಟತನ ಬರಲಿ,  ಹಸಿದು ತಿನ್ನುತ್ತಿರುವವನ ಅನ್ನವನ್ನು ಕಿತ್ತು ಎಸೆಯುವಂತೆ ಆಗಲಿ,  ತೆರಿಗೆ ವಸೂಲಿ ಮಾಡಿಯೂ  ಪ್ರಜೆಗಳನ್ನು ಕಾಪಾಡದ ಕೆಟ್ಟ ರಾಜನ ದುರ್ಬುದ್ಧಿಗಳು ಬರಲಿ.  ಒಳ್ಳೆಯ ಹೆಂಡತಿಗೆ ಮೋಸ ಮಾಡುವ  ಗಂಡನಿಗೆ  ಬರುವ  ದುರ್ಬುದ್ಧಿಗಳೆಲ್ಲಾ ನನಗೆ ಬರಲಿ. ವಯಸ್ಸಾದ ತಂದೆ-ತಾಯಿಯನ್ನು  ಮನೆಯಿಂದ ಹೊರಹಾಕಿದ  ನೀಚಮಗ  ನಾನಾಗಲಿ,  ರಾಮನನ್ನು  ಕಾಡಿಗೆ ಕಳಿಸುವಲ್ಲಿ ನನ್ನ ಪಾತ್ರ ಇದ್ದರೆ, ಆಗತಾನೆ ಹುಟ್ಟಿದ ಶಿಶುವಿನ ಕುತ್ತಿಗೆ ಹಿಸುಕಿ ಸಾಯಿಸುವಂಥ  ಕೆಟ್ಟಗುಣ ಬರಲಿ,  ಹೀಗೆ ಇನ್ನೂ ಬೇಕಾದಷ್ಟು ತನಗೆ ತಾನೇ ಶಪಿಸಿಕೊಳ್ಳುತ್ತಾ, ದುಃಖವನ್ನು ತಾಳಲಾರದೆ ಆಯಾಸದಿಂದ ಕೌಸಲ್ಯೆ  ಪಾದಗಳ ಮೇಲೆ ಎಚ್ಚರ ತಪ್ಪಿ ಬಿದ್ದನು.  ಭರತನ ನೋವಿನ  ಮಾತುಗಳನ್ನು ಕೇಳಿದ ಕೌಸಲ್ಯೆ ಗೆ, ನನ್ನ ಮಗ ಭರತನಿಂದ  ಇಂತಹ ಕೆಟ್ಟ ಕೆಲಸ ಮಾಡಲು ಎಂದಿಗೂ ಸಾಧ್ಯವಿಲ್ಲ ಎಂಬುದು ಖಚಿತವಾಯಿತು. ಅವನನ್ನು  ತನ್ನ ತೊಡೆಯ ಮೇಲೆ ಮಲಗಿಸಿ ಕೊಂಡು ನೀರು ಕುಡಿಸಿ ಉಪಚರಿಸಿದಳು. ಇದು ರಾಮಾಯಣದ  ಶಾಪ ಆಣೆಗಳ, ತುಣುಕು. 

ಮಹಾಭಾರತದಲ್ಲಂತೂ, ಪಾಪ,  ಶಾಪ, ತಾಪ, ಶಪಥಗಳು ಲೆಕ್ಕವಿಲ್ಲದಷ್ಟು.
ಅದರಲ್ಲಿ  ಧೃತರಾಷ್ಟ್ರ ಅರಮನೆಯಲ್ಲಿದ್ದರೆ,  ಪಾಂಡು ಕಾಡು-ಮೇಡುಗಳಲ್ಲಿ ಕಳೆದದ್ದು ಹೆಚ್ಚು, ಕಾಡಿನಲ್ಲಿ ಕಾಲ ಕಳೆಯುವುದು ಆತನಿಗೆ ಬಹಳ ಇಷ್ಟವಿತ್ತು. ಹೀಗೊಮ್ಮೆ ತನ್ನ ಮಡದಿಯರಾದ  ಕುಂತಿ ಮತ್ತು ಮಾದ್ರಿಯರ  ಜೊತೆಗೆ ವನವಿಹಾರಕ್ಕೆ ಬಂದಾಗ  ಭೇಟಿಯಾಡಲು ಹೋಗುತ್ತಾನೆ, ಮೈಥುನ ಕ್ರಿಯೆಯಲ್ಲಿದ್ದ  ಗಂಡು-ಹೆಣ್ಣು ಜಿಂಕೆಗಳ ಮೇಲೆ ಬಾಣ ಪ್ರಯೋಗ ಮಾಡುತ್ತಾನೆ. ಬಾಣ  ಚುಚ್ಚಿದ ನೋವಿನಲ್ಲೇ,  ಗಂಡು ಜಿಂಕೆ  ಮಾತನಾಡಿ, ನೀನು ಮಾಡಿದ್ದು ಅಪರಾಧ ಎನ್ನುತ್ತದೆ,  ಯುದ್ಧದಲ್ಲಿ ಸೈನಿಕರನ್ನು ಕೊಲ್ಲುವುದು ಅವಶ್ಯ, ಹಾಗೆ ಬೇಟೆಯಾಡುವುದು ರಾಜ ಧರ್ಮ ತಪ್ಪು ಹೇಗೆ ಆಗುತ್ತದೆ ಎಂದು ಪಾಂಡು ಕೇಳಿದ್ದಕ್ಕೆ,  ಬೇಟೆಯಾಡುವುದು ನಿನ್ನ ತಪ್ಪಲ್ಲ ಆದರೆ ಸನ್ನಿವೇಶ, ಸಂದರ್ಭಗಳನ್ನು  ನೋಡಿ ಖಚಿತಪಡಿಸಿಕೊಂಡು ಬೇಟೆಯಾಡುವುದು ರಾಜಧರ್ಮ.  ಅದರಲ್ಲೂ  ಪ್ರಾಣಿ-ಪಕ್ಷಿ, ಕ್ರಿಮಿ,ಕೀಟ,  ,ಜಂತು ಯಾವುದೇ ಆಗಿರಲಿ, ಅಂತಹ  ಗಂಡು - ಹೆಣ್ಣು  ಸುಖದಲ್ಲಿದ್ದಾಗ  ಯಾರೇ ಆದರೂ ಸರಿ,  ಅವುಗಳಿಗೆ  ತೊಂದರೆ ಮಾಡುವುದು, ಬಾಣ ಬಿಡುವುದು, ಸಾಯಿಸುವುದು ಅಕ್ಷಮ್ಯ, ಎಂದು ಶಾಪ ಕೊಡುತ್ತಾ,  ನಿನ್ನ ಜೀವನದಲ್ಲಿ ಇಂತಹ ಸುಖದ ಸನ್ನಿವೇಶ ಇದ್ದಾಗಲೇ  ನಿನಗೆ ಸಾವು ಬರಲಿ' ಎಂದು ಶಾಪ ಕೊಟ್ಟು ಜಿಂಕೆಯ ರೂಪದಲ್ಲಿದ್ದ ಮಹರ್ಷಿ 'ಕಿಂದಮ' ನಿಜ ರೂಪ ತಾಳುತ್ತಾನೆ. ನಂತರ ಪಾಂಡು ಕುರಿತು, ನೀನು ನನ್ನನ್ನು ಜಿಂಕೆ ರೂಪದಲ್ಲಿದ್ದಾಗ ಕೊಂದ ಕಾರಣ ನಿನಗೆ 'ಬ್ರಹ್ಮಹತ್ಯಾ' ದೋಷ ಬರುವುದಿಲ್ಲ. ನೀನು  ಸುಖ ಅನುಭವಿಸುವ ಸಮಯದಲ್ಲಿ ಶಾಪ ಫಲಿಸುತ್ತದೆ ಎಂದು ಹೇಳಿ ಜಿಂಕೆಗಳು ಅಸುನೀಗಿದವು. 

ಶಾಪಗಳಲ್ಲಿ ಕೆಲ ವಿಧಗಳಿವೆ.  ಕಿಂದಮ ಮಹರ್ಷಿ ಶಾಪ ಕೊಟ್ಟಿರಬಹುದು. ಇದು  ತೊಂದರೆ ಇಲ್ಲದ ‌ಶಾಪ, ಪಾಂಡು ಕಾಮ  ಬಿಟ್ಟಿದ್ದರೆ ಎಷ್ಟು ವರ್ಷ ಬೇಕಾದರೂ ಬದುಕಬಹುದಿತ್ತು. ನಂತರ ಪಾಂಡು ಸಂನ್ಯಾಸ ಸ್ವೀಕರಿಸಿದ. ಬದುಕಿನುದ್ದಕ್ಕೂ  ಪ್ರೀತಿ, ದ್ವೇಷ, ಮಾಡುವಂತಿಲ್ಲ, ಮರಣವನ್ನು ತಳ್ಳುವಂತಿಲ್ಲ ತಟಸ್ಥ ರೀತಿಯ ಜೀವನ. ಪಾಂಡು  ವೈಭೋಗ ಜೀವನ ತೊರೆದು, ಸಾತ್ವಿಕ ಜೀವನ ಆರಿಸಿಕೊಂಡನು , ಬೇಡಿ ತಿನ್ನುವುದು ಅದೂ  ಸಿಕ್ಕರೆ ಮಾತ್ರ ಆಹಾರ, ಸಂಗ್ರಹಿಸುವುದು ಇಲ್ಲವೇ ಇಲ್ಲ. ಈ ರೀತಿ ಅವನಿಗೆ ಅವನೇ ಶಾಪ ದಂತಹ  ಕಟ್ಟುಪಾಡುಗಳನ್ನು  ಹಾಕಿ ಕೊಂಡ.  ಆದರೆ ಕುಂತಿ ಮಾದ್ರಿಯರು ಇದಕ್ಕೆ ಒಪ್ಪಲಿಲ್ಲ. ಎಲ್ಲರೂ ಬೇರೆ ಬೇರೆಯಾಗಿ ಬದುಕುವುದೆಂದು ನಿಶ್ಚಯಿಸಿದರು. ಹಿಮಾಲಯದತ್ತ  ಹೊರಟು ಶತಶೃಂಗ ಪರ್ವತಕ್ಕೆ  ಬಂದರು. ಅಲ್ಲಿ ತಪಸ್ವಿಗಳು, ಸಿದ್ಧರು, ಚಾರಣರು ಇದ್ದರು. ಪಾಂಡು ಮಹರ್ಷಿಗಳ ಪ್ರೀತಿ ವಿಶ್ವಾಸ ಗಳಿಸಿದನು.  'ಬ್ರಹ್ಮರ್ಷಿ' ಆಗುವಷ್ಟು ತನಗೆ ತಾನೇ  ವಿಧಿಸಿಕೊಂಡು ಕಠಿಣಾತಿಕಠಿಣ  ತಪಸ್ಸಿನ ಜೀವನ ನಡೆಸಿದ್ದನು.  ಮಕ್ಕಳಿರದ ಕಾರಣ  'ಶತಶೃಂಗ' ಕ್ಕಿಂತ ಮೇಲೆ  ಹೋಗಲಾಗಲಿಲ್ಲ. ಅವನಿಗಿದ್ದ  ಶಾಪ ಕಾರಣ, ಆ ದಿನ ಅವನ  ಮನಸ್ಸು ದುರ್ಬಲವಾಗುತ್ತದೆ, ಒಂದು ಸಂದರ್ಭದಲ್ಲಿ , ಮಾದ್ರಿ ಬೇಡಬೇಡವೆಂದರೂ, ಪಾಂಡು ಸಂಯಮ ಕಳೆದುಕೊಳ್ಳುತ್ತಾನೆ.   ಮರಣ  ಬರುತ್ತದೆ. 

ಕರ್ಮಸಿದ್ಧಾಂತದಂತೆ, ಯಾವುದನ್ನು , ಯಾರಿಂದಲೂ,ತಪ್ಪಿಸಿಕೊಳ್ಳಲು,
ಸರಳ  ಮಾರ್ಗದಲ್ಲಿ ಹೋಗಲು ಸಾಧ್ಯವಿಲ್ಲ. ಸ್ವತಹ ಅನುಭವಿಸಲೇಬೇಕು ಇಲ್ಲದಿದ್ದರೆ,  ಪಾಪದ ದುಪ್ಪಟ್ಟು ಸತ್ಕಾರ್ಯ ಮಾಡಿ  ಜಗತ್ತಿಗೆ ಒಳ್ಳೆಯದನ್ನು ಮಾಡುವ  ಮೂಲಕ  ಆಕಸ್ಮಿಕವಾಗಿ ಅಥವಾ ಗೊತ್ತಿಲ್ಲದೆ ಬಂದ  ಶಾಪದಿಂದ  ಮುಕ್ತಿ ಪಡೆಯಬಹುದು. 

ಅಷ್ಟಾದಶ ಪುರಾಣನಾಂ, ಸಾರಂ ವ್ಯಾಸೇನ  ಕೀರ್ತಿತಂ !
ಪರೋಪಕಾರಃ  ಪುಣ್ಯಾಯ  ಪಾಪಾಯ ಪರಪೀಡನಂ! 

೧೮, ಪುರಾಣಗಳಲ್ಲೂ  ವ್ಯಾಸರು ಉಲ್ಲೇಖಿಸಿರುವ 
ಸಾರ ಇದೇ,  ಪರೋಪಕಾರ  ಮಾಡಿದರೆ  ಪುಣ್ಯ, 
ಹಿಂಸೆ  ಮಾಡಿದರೆ  ಪಾಪ  ಲಭಿಸುತ್ತದೆ ಎಂದು. 

ವಂದನೆಗಳೊಂದಿಗೆ,
ಬರಹ:- ಆಶಾ ನಾಗಭೂಷಣ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ