ಗುರುವಾರ, ಏಪ್ರಿಲ್ 7, 2022

ಗಾಂಧಾರಿಯ ಹಸಿವು

ಗಾಂಧಾರಿಯ ಹಸಿವು:-. 

ಕುರುಕ್ಷೇತ್ರ ಯುದ್ಧ ಮುಗಿದಿದೆ. ಪಾಂಡವರಿಗೂ ಮತ್ತು  ಕೌರವರಿಗೂ ನಡೆದ ಮಹಾಭಾರತ ಯುದ್ಧದಲ್ಲಿ ಕೌರವರೆಲ್ಲರೂ ನಾಶವಾದರು. ಕೌರವರು ಗಾಂಧಾರಿಯ ಮಕ್ಕಳು. ಗಾಂಧಾರಿ ಈಗ ಅತ್ಯಂತ  ದುಃಖದಿಂದಿದ್ದಳು.
ಯುದ್ಧಭೂಮಿಗೆ ಹೋಗಿ ಮಡಿದು ಬಿದ್ದ ತನ್ನ ಮಕ್ಕಳನ್ನು, ಮಗನಾದ ದುರ್ಯೋಧನನನ್ನು ತೊಡೆಯ ಮೇಲಿಟ್ಟುಕೊಂಡು ಬಿಕ್ಕಿಬಿಕ್ಕಿ ಅಳುತ್ತಾ ಕುಳಿತಳು. ಪಶ್ಚಿಮದಲ್ಲಿ ಸೂರ್ಯ ಮುಳುಗಿದರೂ, ಆಕೆ ಕುಳಿತಲ್ಲಿಂದ ಏಳಲಿಲ್ಲ. ಉಳಿದವರೆಲ್ಲ ತಮ್ಮ ನಿವಾಸಗಳಿಗೆ ಮರಳಿದರು. ಗಾಂಧಾರಿಯು  ತನ್ನ ಮಕ್ಕಳ ಶವಗಳನ್ನು ಬಿಟ್ಟು ಬರಲು ಮನಸ್ಸಿಲ್ಲದೆ ತನ್ನ ಪುತ್ರರ ಮೇಲೆ ಅಷ್ಟೊಂದು ವ್ಯಾಮೋಹಗೊಂಡಿದ್ದಳು. 

ಕೃಷ್ಣನು  ಅಲ್ಲಿಗೆ ಬಂದು ಆಕೆಯನ್ನು ಸಂತೈಸುತ್ತಾ," ತಾಯಿ ಈ ವ್ಯರ್ಥ ದುಃಖವನ್ನು ಸಾಕು ಮಾಡು, ತಪ್ಪಿಸಲಾಗದ ನಿನ್ನ ಮಕ್ಕಳ ಅಗಲುವಿಕೆಯ ಸಲುವಾಗಿ ಅತ್ತು  ಪ್ರಯೋಜನವಿಲ್ಲ .ಮಕ್ಕಳು ಮತ್ತು ಬಂಧುಗಳು ಇವರೆಲ್ಲರೂ ವ್ಯಾಮೋಹದ ಬಂಧನದಿಂದ ಒಂದುಗೂಡುವರು. ಒಂದು ಛತ್ರದಲ್ಲಿ ಸೇರಿದ ಪ್ರಯಾಣಿಕರು ತಮ್ಮ ತಮ್ಮ ಊರುಗಳಿಗೆ ಅಲ್ಲಿಂದ ತೆರಳುವಂತೆ ಈ ಪ್ರಪಂಚದಲ್ಲಿ ಒಂದು ಕಡೆ ಸೇರಿದ ಇವರು ಕೂಡ ಕಾಲಾನುಕಾಲಕ್ಕೆ ಅಲ್ಲಿಂದ ತೆರಳಲೇಬೇಕು. ಹಾಗೆ ನೀನು ದುಃಖಿಸಬೇಡ ಹೀಗೆ ದುಃಖಿಸುತ್ತಿದ್ದರೆ  ಅವರು ಇನ್ನು  ಮರಳಿ ಬರುವುದಿಲ್ಲ. ಸಾವೆಂದರೆ ಒಂದು ವಿಧವಾದ ಹೊರ ತೊಡುಗೆಯನ್ನು ಕಳಚುವ ಪ್ರವೃತ್ತಿ. ಅಂತರಾತ್ಮನು ಸಾಯುವುದು ಇಲ್ಲ, ಹುಟ್ಟುವುದು ಇಲ್ಲ ಅರ್ಥವಾಯಿತೆ  ತಾಯಿ. ಮೇಲೇಳು  ಮನೆಗೆ ಹೋಗೋಣ. ನೀನು ಹಸಿವನ್ನು ತಾಳಲಾಗುವುದಿಲ್ಲ  ಹಸಿವಿನಿಂದ ಮತ್ತಷ್ಟು ದುಃಖವಾಗುತ್ತದೆ ಈಗ ಕತ್ತಲಾಯಿತು ಏಳು" ಎಂದನು. 

ಗಾಂಧಾರಿ ಸಿಟ್ಟಿನಿಂದ  "ಏ ಕೃಷ್ಣಾ ಈ ಎಲ್ಲಾ ಅನಾಹುತಗಳಿಗೆ ನೀನೇ ಕಾರಣ. ದಯಮಾಡಿ ನನ್ನನ್ನು ಇಲ್ಲಿಂದ ಕದಲಿಸಬೇಡ, ಖಂಡಿತವಾಗಿಯೂ ನಾನು ಇಲ್ಲಿಂದ ಬರುವುದಿಲ್ಲ. ನನ್ನ ಮಕ್ಕಳೊಂದಿಗೆ ಇಲ್ಲಿಯೇ ಸಾಯುತ್ತೇನೆ. ಮಕ್ಕಳೆಲ್ಲರನ್ನು  ಕಳೆದುಕೊಂಡ ಮೇಲೆ ನನಗೆ ಯಾವುದರ ಮೇಲೆಯೂ ಇಷ್ಟವಿಲ್ಲ.  ನಾನು ಏನನ್ನೂ ತಿನ್ನುವುದಿಲ್ಲ. ನಿರಶನ  ವ್ರತ ಹಿಡಿದು ಸಾಯುತ್ತೇನೆ". ಕೃಷ್ಣನು  ಈ ರೀತಿ ಮೊಂಡುತನದಿಂದ ಕುಳಿತ ಗಾಂಧಾರಿಯನ್ನು ಒತ್ತಾಯಿಸದೆ  ಅಲ್ಲಿಂದ ಹಾಗೆಯೇ ನಡೆದನು.  

ಗಾಂಧಾರಿಯು ಯುದ್ಧಭೂಮಿಯಲ್ಲಿ ಕುಳಿತು ಎರಡು ದಿನ ಕಳೆಯಿತು.ಅವಳಿಗೆ ಯಾರು ಆಹಾರ ನೀರು ಕೊಡಲಿಲ್ಲ. ಆಕೆ ಹಸಿವಿನಿಂದ ತುಂಬಾ ಒದ್ದಾಡುತ್ತಿದ್ದಳು. ತಿನ್ನಲು ಏನಾದರೂ ಸಿಕ್ಕಿತೆಂದು ಆಕಡೆ ಕಡೆ ಹುಡುಕಿ ದಳು. ಆದರೆ ಅವಳಿಗೆ ಏನೂ ಸಿಗಲಿಲ್ಲ. ಹತ್ತಿರದಲ್ಲಿದ್ದ ಮರದ ಕೊಂಬೆಯೊಂದರ ಮೇಲೆ ಮಾಂಸವು ನೇತಾಡುತ್ತಿತ್ತು. ಸುತ್ತಮುತ್ತ ನೋಡಿ ಯಾರೂ ಇಲ್ಲದ್ದನ್ನು ಕಂಡು ಅದನ್ನು ತಿಂದು ಹಸಿವನ್ನು ನೀಗಿಸಿಕೊಳ್ಳಬೇಕೆಂದು ಮನಸ್ಸು ಮಾಡಿದಳು. ಆದರೆ ಆಗಲಿಲ್ಲ ಮಾಂಸವು ಬಹಳ ಎತ್ತರದಲ್ಲಿತ್ತು. ನೆಲದ ಮೇಲೆ ನಿಂತು ಅದನ್ನು ತೆಗೆದುಕೊಳ್ಳುವುದು ಕಷ್ಟವಾಗಿತ್ತು. ಈಗ ಆಕೆಯು ತನ್ನ ಮಕ್ಕಳ ಶವಗಳನ್ನು ಒಂದರ ಮೇಲೊಂದು ಇಟ್ಟು ಮೇಲಕ್ಕೆ ಹತ್ತಿದಳು. ನೇತಾಡುತ್ತಿದ್ದ ಮಾಂಸವು ಅವಳ ಕೈಗೆ  ಎಟುಕಿತು. ಅವಳು ಅದನ್ನು ಇನ್ನೇನು ಬಾಯಲ್ಲಿ ಇಟ್ಟುಕೊಳ್ಳಬೇಕೆಂದು ಅಷ್ಟರಲ್ಲಿ ಎಲ್ಲರ ಅಂತರಾತ್ಮದಲ್ಲಿ ವಾಸವಾಗಿರುವ ಶ್ರೀಕೃಷ್ಣನು ಅಲ್ಲಿ ಪ್ರತ್ಯಕ್ಷನಾದನು. ಆಕೆಯನ್ನು ಕುರಿತು " ತಾಯೀ ಆ ಮಾಂಸವನ್ನು ತಿನ್ನದಿರು. ನಿನಗಾಗಿ ಸೊಗಸಾದ ಭಕ್ಷ ಭೋಜ್ಯಗಳ  ಭೋಜನವನ್ನು ತಂದಿದ್ದೇನೆ. ಇವುಗಳನ್ನು ಮನದಣಿಯುವಂತೆ ಊಟ ಮಾಡು. ನಿನ್ನ ಸೇವೆ ಮಾಡಲು ನಾನು ಇರುವಾಗ ನೀನೇಕೆ ಕಷ್ಟದಿಂದ ಹೀಗೆ ನರಳಬೇಕು? ತಾಯಿ ನಾನು ಆಗಲೇ ಹೇಳಲಿಲ್ಲವೇ ಹಸಿವು ಮನುಷ್ಯನನ್ನು ಪೀಡಿಸುತ್ತದೆ ಅದನ್ನು ಯಾರು ಗೆಲ್ಲಲು ಸಾಧ್ಯವಿಲ್ಲ"

ಗಾಂಧಾರಿಯು ನಾಚಿಕೆ, ಅವಮಾನ  ಮತ್ತು ದುಃಖದಿಂದ ತಲೆ ತಗ್ಗಿಸಿದಳು. ಕೃಷ್ಣಪರಮಾತ್ಮನ ಪಾದಗಳಿಗೆ ನಮಸ್ಕಾರ ಮಾಡಿ ಹೀಗೆಂದಳು.
" ಏ ಕೃಷ್ಣ ನೀನು ಭಗವಂತ. ಎಲ್ಲರ ಹೃದಯಮಂದಿರದಲ್ಲಿ ನೆಲೆಸಿರುವ ಅಂತರ್ಯಾಮಿ ಅಲ್ಲವೇ? ನೀನು ವಿಶ್ವಕ್ಕೆ ಒಡೆಯ. ದಯಮಾಡಿ ನನ್ನ ಅಜ್ಞಾನವನ್ನು ನಿವಾರಿಸಿ ಜ್ಞಾನ ಜ್ಯೋತಿಯನ್ನು ನೀಡು. ನನ್ನ ಮಕ್ಕಳ ಮೇಲಿನ ವ್ಯಾಮೋಹವನ್ನು ಬಿಡುವುದು ಅತಿ ಕಷ್ಟ.ಈ ಅಜ್ಞಾನವನ್ನು ನಿವಾರಿಸು" ಎಂದು ಬೇಡಿಕೊಂಡಳು. ಕೃಷ್ಣನು ಗಾಂಧಾರಿಯನ್ನು ಕರೆದುಕೊಂಡು ಯುಧಿಷ್ಠಿರನ ಅರಮನೆಗೆ ಬಂದನು. ಯುಧಿಷ್ಠಿರನು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡನು. 

ಹಸಿವಿನ ಬಾಧೆ ಬಹಳ ದೊಡ್ಡದು. ವ್ಯಾಮೋಹ ಬಂಧನವು ಮತ್ತು ದೊಡ್ಡದು.
ಕರ್ಮಬಂಧನ ಎಲ್ಲಕ್ಕಿಂತ ದೊಡ್ಡದು.  ಶರೀರ ವ್ಯಾಮೋಹವು ಉನ್ನತವಾದ ಬಂಧನ. ಈ  ಶಾರೀರಿಕ ಭ್ರಮೆಯನ್ನು  ನಿರ್ದಯೆಯಿಂದ ಕತ್ತರಿಸಿ ಹಾಕಬೇಕು. ವ್ಯಾಮೋಹದಿಂದ ದೂರವಾಗಿ ಬಂದನಾತೀತರಾರಾಗಿರಬೇಕು. ಸ್ವರ್ಗ ಸುಖದ ಲೋಕಕ್ಕೆ ಪ್ರವೇಶಿಸಲು ಹೆಬ್ಬಾಗಿಲಿನ ಬೀಗವನ್ನು ತೆಗೆಯಬೇಕು. 

"ಪಾಪೋಹಂ ಪಾಪಕರ್ಮಾಹಂ ಪಾಪಾತ್ಮಾ ಪಾಪಸಂಭವಃ 
ತ್ರಾಹಿಮಾಂ ಕೃಪಯಾ ದೇವ  ಶರಣಾಗತ ವತ್ಸಲ 
ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ 
ತಸ್ಮಾತ್ ಕಾರುಣ್ಯ ಭಾವೇನ 
ರಕ್ಷಮಾಂ ಪರಮೇಶ್ವರ ರಕ್ಷ ರಕ್ಷೊ ಜಗದೀಶ್ವರ !"
                  ಶ್ರೀಕೃಷ್ಣಾರ್ಪಣಮಸ್ತು.

ವಂದನೆಗಳೊಂದಿಗೆ,
ಬರಹ:- ಆಶಾ ನಾಗಭೂಷಣ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ