ಭಾನುವಾರ, ಡಿಸೆಂಬರ್ 25, 2022

ಗುರುಗಳು ಆಶೀರ್ವದಿಸಿ ನೀಡಿದ ಮಂತ್ರಾಕ್ಷತೆಯನ್ನು ಹೇಗೆ ಉಪಯೋಗಿಸಬೇಕು

🕉️ ಓಂ ಶ್ರೀ ಗುರುಭ್ಯೋ ನಮಃ 🕉️ ‌ ‌ ‌              ‌                                                                             ‌
*ಗುರುಗಳು ಆಶೀರ್ವದಿಸಿ ನೀಡಿದ ಮಂತ್ರಾಕ್ಷತೆಯನ್ನು ಹೇಗೆ ಉಪಯೋಗಿಸಬೇಕು...?*

“ಅಕ್ಷತೆಯಲ್ಲಿ” ನಾಲ್ಕು ತರಹ ಇದೆ..
೧. *ಅಕ್ಕಿಯ ಅಕ್ಷತೆ* : ಪ್ರತಿದಿನ ಪೂಜೆಯಲ್ಲಿ, ವ್ರತಗಳಲ್ಲಿ, ಶುಭ ಕಾರ್ಯಗಳಲ್ಲಿ “ಅಕ್ಕಿಯಲ್ಲಿ ಮಾಡಿದ ಅರಿಶಿನದ ಅಕ್ಷತೆ ಮತ್ತು ಕುಂಕುಮದ ಅಕ್ಷತೆ ಉಪಯೋಗಿಸುತ್ತೇವೆ..!

೨. *ತಿಲಾಕ್ಷತೆ* : ಹಿರಿಯರ ಕಾರ್ಯಗಳಲ್ಲಿ ಉಪಯೋಗಿಸುವ ಕರೀ ಎಳ್ಳು ಮತ್ತು ಯುವ ಅಕ್ಷತೆಗೆ “ತಿಲಾಕ್ಷತೆ” ಎಂದು ಹೆಸರು..!

೩. *ಮಂತ್ರಾಕ್ಷತೆ* : ಮಂತ್ರಿಸಿದ ಅಕ್ಷತೆಗೆ “ಮಂತ್ರಾಕ್ಷತೆ ” ಎಂದು ಹೆಸರು..!
ಉದಾಹರಣೆಗೆ : ರಾಘವೇಂದ್ರ ಸ್ವಾಮಿಗಳ ಮಠ ದಲ್ಲಿ ಕೊಡುವುದು “ಮಂತ್ರಾಕ್ಷತೆ” , ಇಲ್ಲಿ ಮೂಲರಾಮರಿಗೆ, ರಾಘವೇಂದ್ರ ಸ್ವಾಮಿಗಳಿಗೆ ಪೂಜೆ ಮಾಡಿ ಪ್ರಸಾದವಾಗಿ ಕೊಡುತ್ತಾರೆ..!

ಈ ಮಂತ್ರಾಕ್ಷತೆಯಿಂದ -
• ವಿದ್ಯಾರ್ಥಿಗಳಿಗೆ ಜ್ಞಾಪಕಶಕ್ತಿ ಹೆಚ್ಚಾಗುತ್ತದೆ, ವಿದ್ಯಾಭಿವೃದ್ದಿ ಆಗುತ್ತದೆ..!

• ಸಕಲ ವ್ಯಾಧಿಗಳು ರೋಗಗಳು ನಿವಾರಣೆಯಾಗುತ್ತದೆ..

• ಪ್ರಯಾಣದಲ್ಲಿನ ತೊಂದರೆಗಳನ್ನು ನಿವಾರಿಸುತ್ತದೆ..

• ಮನೆಯಲ್ಲಿನ ಸರ್ವದೋಷಗಳು ನಿವಾರಣೆಯಾಗಿ ಉತ್ತಮವಾದ ಅಭಿವೃದ್ಧಿ ಹೊಂದುತ್ತಾರೆ..

“ಅಕ್ಷತೆ” ಇಲ್ಲದೇ ಆಶೀರ್ವಾದ ಮಾಡಬಾರದು..!
****

“ *ಸುವರ್ಣ ಮಂತ್ರಾಕ್ಷತೆ* ” ಮತ್ತು ಮಹತ್ವಗಳು..!

ಸಾಧು ಸನ್ಯಾಸಿಗಳ ಹಾಗೂ ಮಠಗಳಿಗೆ ಹೋದಾಗ, “ಗುರುಗಳು” ನಿಮ್ಮನ್ನು ಮಾತನಾಡಿಸಿ, ವಿಚಾರಿಸಿ, “ನಿಮಗೆ ” “ಫಲಮಂತ್ರಾಕ್ಷತೆ” ಯನ್ನು ಕೊಡುತ್ತಾರೆ..!
ಹೀಗೆ ಗುರುಗಳು ಕೊಡುವ “ಮಂತ್ರಾಕ್ಷತೆಗೆ ” “ *ಸುವರ್ಣ ಮಂತ್ರಾಕ್ಷತೆ* ” ಎಂದು ಹೆಸರು..!!!

ಹಣ್ಣಾದರೆ ಪ್ರಸಾದವಾಗಿ ತಿನ್ನಬಹುದು, ಆದರೆ “ಸುವರ್ಣ ಮಂತ್ರಾಕ್ಷತೆ” ಏನು ಮಾಡಬೇಕು..?
ಇಲ್ಲಿದೆ ನೋಡಿ ಮಾಹಿತಿ..

• "ಸುವರ್ಣ ಮಂತ್ರಾಕ್ಷತೆ” ಯನ್ನು  ಕೈಯಲ್ಲಿ ತೆಗೆದುಕೊಳ್ಳಬಾರದು..!
ತೆಗೆದುಕೊಳ್ಳುವವರು ಪುರುಷರಾದರೆ “ಶಲ್ಯ” ದ ತುದಿಯಿಂದ ತೆಗೆದುಕೊಳ್ಳಬೇಕು..!
“ಹೆಂಗಸರಾದರೆ” “ಸೀರೆಯ” “ಸೆರಗಿನ ತುದಿ” ಯಿಂದ ತೆಗೆದುಕೊಳ್ಳಬೇಕು..!

• ಹೆಂಗಸರ ಸೀರೆಯ ಸೆರಗಿನಲ್ಲಿ ಸದಾ ಲಕ್ಷ್ಮೀದೇವಿ ನೆಲೆಸಿರುತ್ತಾರಂತೆ..!
ಅದಕ್ಕೆ ನಮ್ಮ ಹಿರಿಯರು ಸೆರಗಿನಲ್ಲಿ ಯಾವಾಗಲೂ ಸ್ವಲ್ಪವಾದರೂ ಹಣವನ್ನು ಇಟ್ಟುಕೊಂಡಿರುತ್ತಿದ್ದರು..!

೧. ಸುವರ್ಣ ಮಂತ್ರಾಕ್ಷತೆಯನ್ನು “ನಗದು” ಪೆಟ್ಟಿಗೆಯಲ್ಲಿ ಇಟ್ಟು ಪ್ರತಿದಿನ ಗುರುಗಳ ಪ್ರಾರ್ಥನೆ ಮಾಡಿ ಪೂಜಿಸಿದರೆ ಮನೆಯಲ್ಲಿನ ಸರ್ವದಾರಿದ್ರ್ಯಗಳೂ ನಿವಾರಣೆಯಾಗುತ್ತದೆ..!

೨. ವ್ಯಾಪಾರ-ವ್ಯವಹಾರ ಮಾಡುವ ಜಾಗದಲ್ಲಿ ಇಟ್ಟು ಪೂಜಿಸಿದರೆ ಅಧಿಕ ಲಾಭವಾಗಿ ಅಭಿವೃದ್ಧಿ ಆಗುತ್ತದೆ..

೩. ಸುವರ್ಣ ಮಂತ್ರಾಕ್ಷತೆಯನ್ನು ದೇವರ ಮನೆಯಲ್ಲಿ ಪ್ರತಿದಿನ ಇಟ್ಟು ಪೂಜಿಸುತ್ತಿದ್ದರೆ, ಆ ಮನೆಯ ಮೇಲೆ ಯಾವುದೇ ದುಷ್ಟಮಂತ್ರಗಳು, ಮಾಟ ಮಂತ್ರಗಳು ಕೆಲಸ ಮಾಡುವುದಿಲ್ಲ..!

೪. ಸುವರ್ಣ ಮಂತ್ರಾಕ್ಷತೆ ಪೂಜೆ ಮಾಡಿ ಗುರುಗಳ ಪ್ರಾರ್ಥನೆ ಮಾಡಿ “ಗುರುಚರಿತ್ರೆ” ಪಾರಾಯಣ ಮಾಡಿದರೆ,
ಜಾತಕದಲ್ಲಿನ “ಗುರು” ಗ್ರಹದ ನೀಚತ್ವ ದೋಷ , ಗುರುಶಾಪ, ಗುರುಅಸ್ತದ ದೋಷಗಳು ಪೂರ್ಣ ನಿವಾರಣೆಯಾಗಿ , “ಜಾತಕಸ್ಥರು ಜೀವನದಲ್ಲಿ ಉತ್ತಮವಾದ ನೆಲೆ ಕಂಡುಕೊಳ್ಳುತ್ತಾರೆ..!

೬. ಪ್ರತಿದಿನ ಪೂಜೆ ಮಾಡುವಾಗ ” ಸುವರ್ಣಮಂತ್ರಾಕ್ಷತೆಗೆ” ಪೂಜೆ ಮಾಡಿದರೆ “ಲಕ್ಷ್ಮೀ” ದೇವಿಯ ಪೂರ್ಣ ಅನುಗ್ರಹವಾಗಿ ಸಮಸ್ತ ಸಾಲದಭಾಧೆ ನಿವಾರಣೆಯಾಗುತ್ತದೆ..!

೭. ಸುವರ್ಣ ಮಂತ್ರಾಕ್ಷತೆಯನ್ನು ಬೆಳ್ಳಿಯ ತಾಯತದಲ್ಲಿಟ್ಟು , ಶಾಸ್ತ್ರೋಕ್ತವಾಗಿ ಧರಿಸಿದರೆ ಸಕಲ ಕಾರ್ಯ ದಿಗ್ವಿಜಯವಾಗಿ , ಮನೋಸಂಕಲ್ಪ ನೆರವೇರುತ್ತದೆ..!

೮. ಮನೆ ಕಟ್ಟುವಾಗ, ಬಾವಿ ತೋಡಿಸುವಾಗ, ಸುವರ್ಣ ಮಂತ್ರಾಕ್ಷತೆ ಪೂಜೆ ಮಾಡಿ, ಗುರುಗಳ ಪ್ರಾರ್ಥನೆ ಮಾಡಿ ಪೂಜಿಸಿದರೆ ಮನೆಯ ಕೆಲಸಗಳು ನಿರ್ವಿಘ್ನವಾಗಿ ನೆರವೇರುತ್ತದೆ.. ಬಾವಿಯಲ್ಲಿ ಸಿಹಿಯಾದ ನೀರು ಬರುತ್ತದೆ..

ರಾಯರ ಮಂತ್ರಾಕ್ಷತೆಯನ್ನು ಶ್ರದ್ದೆ ಭಕ್ತಿಯಿಂದ ಏನು ಮಾಡಬೇಕು ? ಯಾವ ರೀತಿ ಬಳಸಿದರೆ ಗುರುರಾಯರ ಅನುಗ್ರಹ ಪಡೆಯಬಹುದು ? ತಿಳಿದುಕೊಳ್ಳೊಣ ಬನ್ನಿ....

ಗುರುರಾಯರನ್ನು ಭಕ್ತಿಯಿಂದ ನೆನೆಯುತ್ತಾ ಓದುತ್ತಾ ಸಾಗೋಣ ಬನ್ನಿ. ಹಲವಾರು ಕ್ಷೇತ್ರಗಳಲ್ಲಿ ಮಂತ್ರಾಕ್ಷತೆಯನ್ನು ನೀಡಲಾಗುತ್ತದೆ. ಮಂತ್ರಾಕ್ಷತೆಗೆ ಇರುವ ಪ್ರಾಮುಖ್ಯತೆ ನಮ್ಮಲ್ಲಿ ಬಹುತೇಕ ಜನರಿಗೆ ತಿಳಿದಿರುವುದಿಲ್ಲ.

ಮಂತ್ರಾಕ್ಷತೆಯನ್ನು ಬೇಕಾ ಬಿಟ್ಟಿ ಬಳಸುತ್ತಾರೆ. ಕೊಟ್ಟ ಮಂತ್ರಾಕ್ಷತೆಯನ್ನು ತಲೆಗೂ ಸರಿಯಾಗಿ ಹಾಕಿಕೊಳ್ಳದೇ, ಜೇಬಿನಲ್ಲೂ ಸರಿಯಾಗಿ ಇಡದೇ, ನೆಲೆದ ಮೇಲೆ ಅರ್ಧಕ್ಕೆ ಅರ್ಧ ಮಂತ್ರಾಕ್ಷತೆ ಚೆಲ್ಲುತ್ತಾರೆ. ಗುರುಗಳಿಂದ ಸಿಕ್ಕಿತು ಮಂತ್ರಾಕ್ಷತೆ ಬಹಳ ಶಕ್ತಿಯುತವಾದದ್ದಾಗಿದೆ.

ಗುರುಗಳ ಮಂತ್ರಾಕ್ಷತೆ ಪಡೆದ ಎಲ್ಲರಿಗೂ ಎಲ್ಲಾ ಕಾರ್ಯಕ್ಷೇತ್ರದಲ್ಲೂ ಯಶಸ್ಸು ಖಚಿತ. ಮದುವೆ ಶುಭ ಸಮಾರಂಭಗಳಲ್ಲಿಯೂ ಶುಭ ಸಂಕೇತವಾಗಿ ಅಕ್ಷತೆಯನ್ನು ಬಳಸಲಾಗುತ್ತದೆ. ಮದುವೆ ಮಾಡಿಕೊಳ್ಳುವ ಹುಡುಗ ಹುಡುಗಿಗೆ ಹಾಕುವ ಆರತಕ್ಷತೆಯಲ್ಲಿ ಸಾವಿರಾರು ಪ್ರಾರ್ಥನೆ ಇರುತ್ತದೆ.

ರಾಯರ ಮಠದಲ್ಲಿ ನೀಡುವ ನೀಡುವ ಮಂತ್ರಾಕ್ಷತೆಯನ್ನು ನೀವು ತಲೆಗೆ ಹಾಕಿಕೊಳ್ಳುತ್ತೀರಾ ಮತ್ತು ಅದು ಕೆಲ ನಿಮಿಷಗಳಲ್ಲಿ ಕೆಳಗೆ ಬೀಳುತ್ತದೆ. ಮಂತ್ರಾಕ್ಷತೆಗೆ ಶಕ್ತಿ ಅಪಾರ ಅದನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಎಲ್ಲಾ ಕೆಲಸಗಳಲ್ಲಿಯೂ ಯಶಸ್ಸು ಖಚಿತ. ಯಾವುದೇ ರೀತಿಯ ಆರೋಗ್ಯ ಸಮಸ್ಯೆಯಿಂದ ಮುಕ್ತಿಹೊಂದಲು ಮಂತ್ರಾಕ್ಷತೆ ಬಳಸಬಹುದು.

ರಾಯರ ಮಠದಲ್ಲಿ ನೀಡುವ ಮಂತ್ರಾಕ್ಷತೆಯನ್ನು ಒಂದು ಬಿಳಿ ಬಟ್ಟೆಯಲ್ಲಿ ಹಾಕಿ ಅದನ್ನು ನಿಮ್ಮ ದೇಹದ ಬಲಭಾಗದಲ್ಲಿ ಇಟ್ಟು ಕೊಳ್ಳಬೇಕು. ಅಂದರೆ ಬಲಭಾಗದ ಜೇಬಿನಲ್ಲಿ. ನಂತರ ಮನೆಗೆ ತೆರಳಿದಾಗ ಅದಕ್ಕೆ ಶ್ರೀ ಗಂಧವನ್ನು ನೀರಿನಲ್ಲಿ ಕಲಸಿ ಒಂದೆರಡು ತುಳಸಿ ದಳವನ್ನು ಹಾಕಿ ತಲೆಗೆ ಪ್ರೋಕ್ಷಣೆಯನ್ನು ಮಾಡಿಕೊಂಡು ಗುರುರಾಯರನ್ನು ನೆನೆಯುತ್ತಾ ಯಾವುದೇ ಕಾರ್ಯ ಮಾಡಿದರು ಯಶಸ್ಸು ಸಿಗುವುದು ಖಚಿತ. ಬಟ್ಟೆಯಲ್ಲಿ ಇದ್ದ ಅಕ್ಷತೆಯನ್ನು ತಲೆಗೆ ನಿತ್ಯ ಎರಡು ಕಾಳುಗಳನ್ನು ಹಾಕಿಕೊಳ್ಳಿ.
ಮಂತ್ರಾಕ್ಷತೆಯನ್ನು ಶೇಖರಣೆ ಮಾಡಿಟ್ಟುಕೊಳ್ಳಿ.

ಯಾವುದೇ ರೀತಿಯ ಸಮಸ್ಯೆ ಬಂದಾಗ ಮಂತ್ರಾಕ್ಷತೆ ನಿಮ್ಮ ತಲೆ ಮೇಲಿರಲಿ ರಾಯರ ಶ್ರೀ ರಕ್ಷೆ ನಿಮಗಿರುತ್ತದೆ. ಕಷ್ಟಕಾಲದಲ್ಲಿ ರಾಯರ ಮಂತ್ರಾಕ್ಷತೆ ಬಳಸಿ ರಾಯರ ಪವಾಡ ನೇರವಾಗಿ ನೋಡಿ.

*ಮಂತ್ರಾಕ್ಷತೆ*

ಮಂತ್ರಾಕ್ಷತೆಗೆ ಅಪಾರವಾದ ಶಕ್ತಿಯಿದ್ದು ಸರಿಯಾದ ಪದ್ಧತಿಯಲ್ಲಿ ಬಳಸಿದರೆ ಪ್ರತಿ ಕೆಲಸದಲ್ಲೂ ಜಯ ನಿಶ್ಚಿತ ಮತ್ತು ಆರೋಗ್ಯ ಸಮಸ್ಯೆಯಿಂದ ಮುಕ್ತಿ ಪಡೆಯಲು ಸಾಧ್ಯವಿದೆ.
ಮಂತ್ರಾಕ್ಷತೆಗೆ *"ಜೀವನಾಮೃತ"* ಎಂದೂ ಹೇಳುವರು.

ಮಂತ್ರಾಕ್ಷತೆ ಎಂದರೆ ಮಂತ್ರಿಸಿದ/ಮಂತ್ರಪೂರಿತವಾದ ಅಕ್ಷತೆ.
ಗುರುಗಳು ಕೊಡುವ ಮಂತ್ರಾಕ್ಷತೆಯನ್ನು *ಸುವರ್ಣ ಮಂತ್ರಾಕ್ಷತೆ* ಎನ್ನುವರು.

ಮಂತ್ರಾಕ್ಷತೆಯು:
ದೇಹ, ಪ್ರಾಣ ಹಾಗೂ ಆತ್ಮಗಳಿಗೆ ಪೋಷಕ;
ಇಷ್ಟಪ್ರಾಪ್ತಿ, ಅನಿಷ್ಟನಿವೃತ್ತಿ, ದೌರ್ಭಾಗ್ಯದ ನಾಶ, ದಿವ್ಯತ್ವದ ಉದಯ.

ಅರ್ಪಣೆ ಮತ್ತು ಅನುಗ್ರಹಗಳ ದ್ವಿಮುಖ ಸಂವಹನವನ್ನು ಅಕ್ಷತೆ ನಿಭಾಯಿಸುತ್ತದೆ.
ಆಧ್ಯಾತ್ಮಿಕವಾಗಿ ಹೇಳುವುದಾದರೆ ಅಕ್ಷತೆ ಫಲಾಪೇಕ್ಷೆಯೂ ಹೌದು; ಬೀಜ ಮೊಳೆತು ಪಕ್ವವಾಗಿ ಸಿಗುವ ಫಲವೂ ಹೌದು.

ಮಂಗಳದ್ರವ್ಯತ್ರಯಗಳಾದ ಅಕ್ಕಿ, ಅರಸಿನ/ಕುಂಕುಮ, ತುಪ್ಪ/ಸುಣ್ಣ ಸಂಗಮವೇ ಅಕ್ಷತೆ.
ಈ ಅಕ್ಷತೆಯಲ್ಲಿ ವೇದಮಂತ್ರಗಳೊಂದಿಗೆ ಭಗವದ್ರೂಪಗಳ ವಿಶಿಷ್ಟ ಸನ್ನಿಧಾನ ಪ್ರಾಪ್ತವಾಗಿದ್ದು, ಭಗವಂತನಿಗೆ ಸಮರ್ಪಿತ ನಿರ್ಮಾಲ್ಯದಂತೆ ಅತ್ಯಂತ ಪವಿತ್ರವೆನಿಸಿದೆ.
ಮಂತ್ರಾಕ್ಷತೆಯ ಧಾರಣೆಯಿಂದ ದೇಹ ಮನಸ್ಸುಗಳು ಮಾಲಿನ್ಯವನ್ನು ಕಳೆದುಕೊಂಡು ಪಾವಿತ್ರ್ಯವನ್ನು ಪಡೆಯುತ್ತವೆ.

ಈ ಹಿನ್ನಲೆಯಲ್ಲಿ ವೇದಮಂತ್ರಗಳನ್ನು ಪಠಿಸಿ, ಮಂತ್ರಾಕ್ಷತೆಯನ್ನು ಭಗವಂತನಿಗೆ ಅರ್ಪಿಸಿ, ಭಗವದ್ಭಕ್ತರು ಸ್ವೀಕರಿಸುತ್ತಾರೆ.

ಜೀವನದಲ್ಲಿ ಸೋಲದಿರಲು ಮಂತ್ರಾಕ್ಷತೆ ಹಾಗೂ ಅದರ ಕುರಿತು ಅಚಲ ವಿಶ್ವಾಸ ಮುಖ್ಯ.
'ಕ್ಷತ' ಎಂದರೆ ಘಾತ, ಪೆಟ್ಟು, ಆಘಾತ .... ಇವೆಲ್ಲ ಜೀವನದಲ್ಲಿ ಬಂದಾಗ ಅಕ್ಷತೆ ರಕ್ಷಿಸುತ್ತದೆ.
ನಮ್ಮಲ್ಲಿ ಭಾವ ಎಷ್ಟಿದೆಯೋ ಅಷ್ಟು ಫಲವನ್ನು ಮಂತ್ರಾಕ್ಷತೆ ಕೊಡುತ್ತದೆ.
ಮಂತ್ರಾಕ್ಷತೆ ನೆಚ್ಚಿದವರಿಗೆ ಸೋಲಿಲ್ಲ.
ಮಂತ್ರಾಕ್ಷತೆ ಎಲ್ಲಾ ಕ್ಲೇಶಗಳನ್ನೂ, ಪ್ರಶ್ನೆಗಳನ್ನೂ ಉತ್ತರಿಸುತ್ತದೆ ಮತ್ತು ಭವಸಾಗರವನ್ನು ದಾಟಿಸುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ